ಪುತ್ತೂರು: ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ವಿದ್ಯಾರ್ಥಿಯೋರ್ವ ಚೂರಿ ಇರಿದಿದ್ದಾನೆಂದು ಸುಳ್ಳು ಆರೋಪ ಹೊರಿಸಿದ್ದು, ಇದೀಗ ಆ ವಿದ್ಯಾರ್ಥಿನಿಯ ವಿರುದ್ಧ ಕ್ರಮ ಕೈಗೊಂಡು ಕಾಲೇಜಿನಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಪ್ರಾಂಶುಪಾಲರಿಗೆ ಮತ್ತು ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ನೀಡಿದೆ.
ಒಂದು ವೇಳೆ ವಿದ್ಯಾರ್ಥಿನಿಯನ್ನು ವಜಾಗೊಳಿಸದಿದ್ದರೆ ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಸುಳ್ಳು ಪ್ರಕರಣ ದಾಖಲಾಗಿರುವ ಸಂತ್ರಸ್ತ ವಿದ್ಯಾರ್ಥಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗುತ್ತಿದೆ. ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಭೆ; ಪುತ್ತೂರಿನ ಕಾಲೇಜು ವಿದ್ಯಾರ್ಥಿಗಳ ಸಭೆ ನಡೆದಿದ್ದು, ವಿದ್ಯಾರ್ಥಿನಿ ನೀಡಿರುವ ದೂರು ಸುಳ್ಳು ಎಂದು ಹೇಳಲಾಗಿದೆ. ನಕಲಿ ದೂರು ನೀಡಿ ಸಂತ್ರಸ್ತ ವಿದ್ಯಾರ್ಥಿಯ ಮಾನಹಾನಿ ಮಾಡಿದ ವಿದ್ಯಾರ್ಥಿನಿಯನ್ನು ಕೂಡಲೇ ಕಾಲೇಜಿನಿಂದ ವಜಾ ಮಾಡಬೇಕು ಹಾಗು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಯ ಭಾವಚಿತ್ರ ಹಾಕಿ ಬೆದರಿಕೆಯೊಡ್ಡುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಸಭೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.


