ಸುಳ್ಯ; ತಂದೆ ಸಾವನ್ನಪ್ಪಿದ್ದರೂ ವಿದೇಶದಲ್ಲಿದ್ದ ಮಗನಿಗೆ ಊರಿಗೆ ಬರಲು ಕಂಪನಿ ರಜೆ ಕೊಡದೇ ಇದ್ದದ್ದರಿಂದ ಸಂಕಷ್ಟಕ್ಕೆ ಸಿಲುಕ್ಕಿದ್ದ ಯುವಕನೊಬ್ಬನನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುರಕ್ಷಿತವಾಗಿ ಹುಟ್ಟೂರಿಗೆ ತಲುಪಿಸಿದ್ದಾರೆ.
ಸುಳ್ಯ ತಾಲೂಕಿನ ಮಡಪ್ಪಾಡಿಯ ತ್ರಿಶೂಲ್ ಮಾಲ್ಡೀವ್ಸ್ ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ತಂದೆ ಗುರುಪ್ರಸಾದ್ ಗೋಳ್ಯಡಿ ಜೂ. 20ರಂದುನಿಧನ ಹೊಂದಿದ್ದರು. ಆದರೆ ತಂದೆಯ ನಿಧನದ ಸುದ್ದಿ ಕೇಳಿ ಕಂಪನಿಯಲ್ಲಿ ರಜೆ ಕೇಳಿದ್ರೂ ಕಂಪೆನಿ ನಿರಾಕರಿಸಿತು. ಅಲ್ಲದೇ ಪಾಸ್ ಪೋರ್ಟ್ನ್ನೂ ವಶಪಡಿಸಿಕೊಂಡಿತು.
ಇತ್ತ ಏಕೈಕ ಮಗ ಬರುತ್ತಾನೆಂದು ಕುಟುಂಬಸ್ಥರು ಜೂ.24ರ ವರೆಗೂ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಶವಾಗಾರದಲ್ಲಿರಿಸಿದ್ದರು. ಕೊನೆಗೆ ತನಗೆ ಬರಲಾಗುವುದಿಲ್ಲ ಎಂದು ತ್ರಿಶೂಲ್ ಹೇಳಿದ್ದರಿಂದ ಅನಿವಾರ್ಯವಾಗಿ ಕುಟುಂಬಸ್ಥರು ಅಂತ್ಯ ಕ್ರಿಯೆ ನೆರವೇರಿಸಿದ್ದರು.
ಜೂ. 24ರಂದು ಸಂಸದ ಬ್ರಿಜೇಶ್ ಚೌಟ ಪ್ರಮಾಣ ವಚನಕ್ಕಾಗಿ ದಿಲ್ಲಿಗೆ ತೆರಳಿದ್ದಾಗ ಗುರುಪ್ರಸಾದ್ ಅವರ ಹತ್ತಿರದ ಸಂಬಂಧಿ, ಬೆಳ್ತಂಗಡಿಯ ನಿವೃತ್ತ ಉಪನ್ಯಾಸಕ ರುಕ್ಮಯ್ಯ ಗೌಡರು ಸಂಸದರಿಗೆ ದೂರವಾಣಿ ಮೂಲಕ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಹೈಕಮಿಷನ್ಗೆ ಇಮೇಲ್ ಮೂಲಕ ಮನವಿ ಮಾಡಿದ್ದಾರೆ. ಸಂಸದರ ಮನವಿ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಭಾರತೀಯ ರಾಯಭಾರಿ ಮಧ್ಯ ಪ್ರವೇಶಿಸಿದ ಕಂಪೆನಿಯು ಯುವಕನಿಗೆ ವೇತನ ಸಹಿತ ರಜೆ ನೀಡಿತು. ಜೂ.27ರ ರಾತ್ರಿ ತ್ರಿಶೂಲ್ ಬೆಂಗಳೂರಿಗೆ ಬಳಿಕ ಶುಕ್ರವಾರ ಬೆಳಗ್ಗೆ ಮನೆ ತಲುಪಿದ್ದಾರೆ.