ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಮೀನುಗಾರಿಕೆಗಾಗಿ “ತೇಲುವ ಜೆಟ್ಟಿ’ಯು ನಿರ್ಮಿಸಲಾಗುತ್ತಿದೆ.
ಮಂಗಳೂರಿನ ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ಇರುವ ಹೊಗೆ ಬಜಾರ್ ಭಾಗದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಕಾಮಗಾರಿ ಪ್ರಾರಂಭವಾಗಿದ್ದು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್ಡಿಸಿ)ವು ಅನುಷ್ಠಾನದ ಹೊಣೆ ಹೊತ್ತಿದೆ. ಉಡುಪಿಯ ಮಲ್ಪೆಯಲ್ಲೂ ಇಂಥದ್ದೇ ಜೆಟ್ಟಿ ನಿರ್ಮಿಸುವ ಉದ್ದೇಶವಿದೆ.
ಇನ್ನು ಈಗಾಗಲೇ ಮಂಗಳೂರಿನಲ್ಲಿ ಒಂದು “ಕಾಂಕ್ರೀಟ್ ಫಾಂಟೂನ್ಸ್’ ನಿರ್ಮಿಸಿ ನಿಲುಗಡೆ (ಆ್ಯಂಕರ್) ಮಾಡಲಾಗಿದೆ. ಇನ್ನೆರಡು ಫಾಂಟೂನ್ಸ್ ಆಗಬೇಕಿದ್ದು, ಜೆಟ್ಟಿಯು ನೀರಿನ ಮಧ್ಯಭಾಗ ದಲ್ಲಿರುತ್ತದೆ. ಅಲ್ಲಿಂದ ನದಿ ದಡಕ್ಕೆ ಅಗಲದ ರಸ್ತೆ ಸ್ವರೂಪದ ಸಂಪರ್ಕ (ರೋಪ್) ಕಲ್ಪಿಸಲಾಗುತ್ತದೆ. ಇದರ ಮೂಲಕ ಜೆಟ್ಟಿಗೆ ಸಣ್ಣ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶವಾಗಲಿದೆ. ಸಣ್ಣ ದೋಣಿ ಗಳಲ್ಲಿ ತಂದ ಮೀನನ್ನು ಈ ಜೆಟ್ಟಿಯಲ್ಲಿ ಇಳಿಸಿ ಅದನ್ನು ವಾಹನದ ಮೂಲಕ ದಡಕ್ಕೆ ತರಬಹುದು. ರೋಪ್ನ ಇಕ್ಕೆಲಗಳಲ್ಲಿ ದೋಣಿ ನಿಲ್ಲಿಸಬಹುದು.