ಮುಂಬೈ: ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಮುಂಬೈನಲ್ಲಿ ತುಳು-ಕನ್ನಡಿಗರ ಸಮ್ಮೇಳನ ನಡೆಯಿತು.ಮುಂಬೈ ದಕ್ಷಿಣ ಕೇಂದ್ರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ರಾಹುಲ್ ಶೆವಾಲೆ ಅವರ ಚುನಾವಣಾ ಪ್ರಚಾರದ ಅಂಗವಾಗಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ತುಳು-ಕನ್ನಡಿಗರ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಭಾಗವಹಿಸಿದ್ದರು.
ಇದೇ ವೇಳೆ, ಮುಂಬೈ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿ ಅವರ ನಿವಾಸದಲ್ಲಿ ಮೀರಾ ಭಯಂದರ್ ವಿಭಾಗದ ಕರಾವಳಿ ಕರ್ನಾಟಕದ ಸಮಾಜ ಪ್ರಮುಖರ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ಜರಗಿತು. ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು.
ಈ ಮಧ್ಯೆ, ಮುಂಬೈ ಉದ್ಯಮಿ ಶಶಿಧರ್ ಬಂಗೇರ ಪಟ್ಲಕೆರೆ ಅವರ ನಿವಾಸಕ್ಕೆ ಚುನಾವಣೆಯ ಪ್ರಯುಕ್ತ ಭೇಟಿ ನೀಡಿದ ನಳೀನ್ ಕುಮಾರ್ ಕಟೀಲ್ ಪರಿವಾರದ ಗೌರವ ಸ್ವೀಕರಿಸಿದರು.