ಡಿ.ಕೆ. ಶಿವಕುಮಾರ್ ಅಂದು ಅಸೆಂಬ್ಲಿ ಚುನಾವಣೆಯಲ್ಲಿ 136 ಗೆಲ್ಲುತ್ತೇವೆ ಎಂದಿದ್ದರು. ಇದೀ ಲೋಕಸಭೆಯಲ್ಲಿ 20 ಸೀಟ್ ಗೆಲ್ಲುತ್ತೇವೆ ಎನ್ನುತ್ತಿದ್ದು, ಎಲ್ಲರಿಗೂ ಅವರ ‘ಸಂಖ್ಯಾಶಾಸ್ತ್ರದ’ ಹಿನ್ನಲೆ ಏನು? ಎನ್ನುವಂತಹ ಪ್ರಶ್ನೆ ಎದುರಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಆಖಾಡ ಸಿದ್ದವಾಗಿದ್ದು, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 28ಕ್ಕೆ ಆರಂಭವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದರೆ, ಕಾಂಗ್ರೆಸ್ ಇನ್ನೂ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಲಿಲ್ಲ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಕ್ಷಿಣ ಕನ್ನಡ, ಉತ್ತರ ಕನ್ನಡದ ಧಾರ್ಮಿಕ ಸ್ಥಳಗಳಿಗೆ ಟೆಂಪಲ್ ರನ್ ಮಾಡಿರುವ ಡಿಕೆಶಿ, ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸೀಟ್ ಅನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮಯುದ್ದಕ್ಕೆ ಮುನ್ನ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ಅನುಗ್ರಹವನ್ನು ಪಡೆದುಕೊಂಡು ಬಂದಿದ್ದೇನೆ,’ ಎಂದಿದ್ದಾರೆ.
ಬಿಜೆಪಿ – ಜೆಡಿಎಸ್ ಮೈತ್ರಿಯ ಎಲ್ಲಾ ತಂತ್ರಗಾರಿಕೆಗೂ ಪ್ರತಿತಂತ್ರ ಹೂಡುತ್ತಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದಾರೆ. ಈ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಹೇಳುತ್ತಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯ ಒಂದು ತಿಂಗಳ ಮುಂಚಿತವಾಗಿಯೇ ಡಿಕೆಶಿ, ಕಾಂಗ್ರೆಸ್ 136 ಸ್ಥಾನವನ್ನು ಗೆಲ್ಲಲಿದೆ ಎಂದು ಹೇಳಿಕೊಂಡು ಬರುತ್ತಲೇ ಇದ್ದರು. ಅದರಂತೇ, ಕಾಂಗ್ರೆಸ್ 135 ಸ್ಥಾನವನ್ನು (ದರ್ಶನ್ ಪುಟ್ಟಣ್ಣಯ್ಯ ಸೇರಿ) ಗೆದ್ದಿತ್ತು. ಅವರು ಹೇಳಿದ್ದಕ್ಕಿಂತ ಕೇವಲ ಒಂದು ಸ್ಥಾನವನ್ನು ಕಾಂಗ್ರೆಸ್ ಕಮ್ಮಿ ಗೆದ್ದಿತ್ತು.
ಅದು ಹೇಗೆ ಅಷ್ಟು ಕರಾರುವಕ್ಕಾಗಿ ಕಾಂಗ್ರೆಸ್ ಇಷ್ಟೇ ಸೀಟ್ ಗೆಲ್ಲುತ್ತೆ ಎಂದು ಹೇಳಿದ್ರಿ ಎನ್ನುವ ಪ್ರಶ್ನೆಗೆ ಅಂದು ಉತ್ತರಿಸಿದ್ದ ಡಿಕೆಶಿ, “ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲವಿದೆ, ಎಲ್ಲಿ ಭಕ್ತಿಯಿದೆಯೋ ಅಲ್ಲಿ ಭಗವಂತ ಇದ್ದಾನೆ. ನನ್ನ ಪ್ರತೀ ಹೆಜ್ಜೆಗೆ ಬೆಂಗಾವಲಿನಂತೆ ನಿಂತು, ನನ್ನೆಲ್ಲಾ ಕಷ್ಟದ ಸಮಯದಲ್ಲಿ ನನಗೆ ಶಕ್ತಿ ತುಂಬಿದ ನೊಣವಿನಕೆರೆ ಅಜ್ಜಯ್ಯನ ಶ್ರೀರಕ್ಷೆಯೇ ಇದಕ್ಕೆ ಕಾರಣ ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.