ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರದೃಷ್ಟಕರ ಘಟನೆ ಸಂಭವಿಸಿದೆ.
ಸಹಸ್ರಳ್ಳಿಯ ಪುಟ್ಟಪ್ಪ ನಾಯ್ಕ ಎಂಬವರ 12 ವರ್ಷದ ಪುತ್ರ ಮಿಥುನ್ ಹಾವಿನ ಕಡಿತಕ್ಕೆ ಬಲಿಯಾದ ದುರ್ದೈವಿ. ಇದೇ ಘಟನೆಯಲ್ಲಿ ಮಿಥುನ್ ಸಹೋದರಿ ದೀಕ್ಷಾಳಿಗೂ ಹಾವು ಕಚ್ಚಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ರಾತ್ರಿ ಪೋಷಕರೊಂದಿಗೆ ಮಲಗಿದ್ದ ಮಕ್ಕಳಿಗೆ ಬೆಳಗಿನ ಜಾವದ ಸುಮಾರಿಗೆ ಹಾವು ಕಚ್ಚಿದೆ. ಮಕ್ಕಳು ಏಕಾಏಕಿ ವಾಂತಿ ಮಾಡಲು ಪ್ರಾರಂಭಿಸಿದಾಗ ಪೋಷಕರು ಎಚ್ಚರಗೊಂಡಿದ್ದಾರೆ. ಈ ವೇಳೆ ಮನೆಯಿಂದ ಹಾವೊಂದು ಹೊರಗೆ ಹೋಗುತ್ತಿರುವುದು ಅವರ ಗಮನಕ್ಕೆ ಬಂದಿದೆ.
ತಕ್ಷಣವೇ ಪೋಷಕರು ಸ್ಥಳೀಯರ ಸಹಾಯದೊಂದಿಗೆ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ತೀವ್ರವಾಗಿ ವಿಷ ದೇಹಕ್ಕೆ ಹರಡಿದ್ದರಿಂದ ಮಿಥುನ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಸದ್ಯ ದೀಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


