ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮಂಜೇಶ್ವರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಕಾರ್ಯಕರ್ತರ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ದಿವಂಗತ ಹಿಂದೂ ನಾಯಕನಾಗಿದ್ದ ಜ್ಯೋತಿಷ್ ಬೆಂಬಲಿಗರು, ಜ್ಯೋತಿಷ್ ಸಾವಿಗೆ ನ್ಯಾಯ ದೊರೆಯುವವರೆಗೂ ಬಿಜೆಪಿ ಸಭೆ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ್ಯೋತಿಷ್ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹಿಂದೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಭರವಸೆ ನೀಡಿದ್ದು, ಜ್ಯೋತಿಷ್ ಸಾವಿನ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ಜಿಲ್ಲೆಯಲ್ಲಿ ಸಭೆ ನಡೆಯಲು ಬಿಡುವುದಿಲ್ಲ ಎಂದು ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕಾಸರಗೋಡಿನ ಕೆಲವು ಬಿಜೆಪಿ ನಾಯಕರ ಷಡ್ಯಂತ್ರದಿಂದ ಜ್ಯೋತಿಷ್ ಸಾವಾಗಿದ್ದು, ಕೂಡಲೇ ಸ್ಥಳೀಯ ಬಿಜೆಪಿ ನಾಯಕರಾದ ಶ್ರೀಕಾಂತ್, ಸುರೇಶ್ ಶೆಟ್ಟಿ ಮತ್ತು ಮಣಿಕಂಠ ರೈ ಅವರನ್ನು ಬಿಜೆಪಿಯಿಂದ ಉಚ್ಛಾಟಿಸುವಂತೆ ಆಗ್ರಹಿಸಿದ್ದಾರೆ.
ಕಾಸರಗೋಡು ಜಿಲ್ಲಾದ್ಯಂತ ಬೆಂಬಲಿಗರು ಮತ್ತು ಅಭಿಮಾನಿಗಳನ್ನು ಹೊಂದಿದ್ದ ಹಿಂದೂ ಮುಖಂಡ ಜ್ಯೋತಿಷ್ ಸಾವು 2022 ರಲ್ಲಿ ಸಂಭವಿಸಿತ್ತು.ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಎಂ.ಎಲ್. ಅಶ್ವಿನಿ ಅವರನ್ನು ಕಣಕ್ಕಿಳಿಸಿದೆ.