ಕಾಸರಗೋಡು: ಕೇರೆ ಹಾವೊಂದು ಚಿನ್ನದ ಉಂಗುರದೊಳಗೆ ಲಾಕ್ ಆದ ಘಟನೆ ಕಾಸರಗೋಡು ಜಿಲ್ಲೆಯ ಅಡೂರಿನಲ್ಲಿ ನಡೆದಿದೆ.
ಅಡೂರು ನಿವಾಸಿ ರವಿ ಅವರ ಮನೆಯ ಡ್ರಾಯರ್ ಒಂದಕ್ಕೆ ಸೇರಿಕೊಂಡಿದ್ದ ಕೇರೆ ಹಾವು ಡ್ರಾಯರ್ ನಲ್ಲಿದ್ದ ಚಿನ್ನದ ಉಂಗುರದೊಳಗೆ ನುಗ್ಗಿ ಅಲ್ಲೇ ಲಾಕ್ ಆಗಿದೆ. ರವಿ ಅವರ ಮಕ್ಕಳು ಮನೆಯೊಳಗೆ ಆಟವಾಡುತ್ತಿರುವಾಗ ಟೇಬಲ್ನ ಡ್ರಾಯರ್ ತೆರೆದಿದ್ದು, ಅದರೊಳಗೆ ದೊಡ್ಡ ಕೇರೆ ಹಾವೊಂದು ಸುರುಳಿ ಸುತ್ತಿಕೊಂಡು ಕುಳಿತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಆಹಾರದ ಹುಡುಕಾಟದಲ್ಲಿ ಡ್ರಾಯರ್ನ ಸಣ್ಣ ಸೀಳಿನ ಮೂಲಕ ಒಳಗೆ ಹೋಗುವಾಗ ಡ್ರಾಯರ್ನಲ್ಲಿದ್ದ ಉಂಗುರ ಹಾವಿನ ಮೈಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಬಹಳ ನಾಜೂಕತೆಯಿಂದ ಹಾವನ್ನು ಹೊರತೆಗೆದು, ಅದರ ಮೈಗೆ ಯಾವುದೇ ಗಾಯವಾಗದಂತೆ ಚಿನ್ನದ ಉಂಗುರವನ್ನು ಕತ್ತರಿಸಿ ತೆಗೆದಿದ್ದಾರೆ. ಅನಂತರ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


