ಕಾಸರಗೋಡು: ನಿವೃತ್ತಿಗೆ ಇನ್ನು ಎರಡೇ ವಾರ ಬಾಕಿ ಇರುವಾಗ ಕಣಜದ ಹುಳು ದಾಳಿ ಮಾಡಿ ಶಿಕ್ಷಕ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಪಣತ್ತಡಿ ಪಂಚಾಯತ್ನ ಚಾಮುಂಡಿಕ್ಕುನ್ನು ನಿವಾಸಿ ಪಿ. ವಿಜಯಕುಮಾರ್ (56) ಮೃತರು.
ಇವರು ಪಣತ್ತಡಿಯ ಬಾಲಂತೋಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿರಿಯ ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ವಿಜಯಕುಮಾರ್ ಅವರು ನಾಲ್ವರು ಕಾರ್ಮಿಕರೊಂದಿಗೆ ತುಂಬೋಡಿಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ದಿಬ್ಬದೊಳಗೆ ಗೂಡುಕಟ್ಟಿದ್ದ ಕಣಜಗಳು ಕೆಲಸದ ನಡುವೆ ತೊಂದರೆಗೊಳಗಾಗಿ ಗುಂಪುಗುಂಪಾಗಿ ದಾಳಿ ನಡೆಸಿವೆ. ವಿಜಯಕುಮಾರ್ ಅವರಿಗೆ ಹಲವಾರು ಬಾರಿ ಕುಟುಕಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರೊಂದಿಗಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಕುಮಾರ್ ಅವರು ಮೇ 31ರಂದು ನಿವೃತ್ತರಾಗಲಿದ್ದರು. ಶಾಲೆಯಲ್ಲಿ ಈಗಾಗಲೇ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಮೊದಲ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವಲ್ಲಿ ಅವರು ಮುಂಚೂಣಿಯಲ್ಲಿದ್ದರು ಎಂದು ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಮೃತರು ಪತ್ನಿ ಶ್ರೀಜಾ, ಪುತ್ರಿ ಅಂಜನಾ ಹಾಗೂ ಪುತ್ರ ವಿಷ್ಣು ಅವರನ್ನು ಅಗಲಿದ್ದಾರೆ.


