ಬೆಂಗಳೂರು, ಜೂನ್ 14 : ನಿರ್ಮಾಣವಾಗುತ್ತಿರುವ ಕೆಪಿಸಿಸಿಯ ನೂತನ ಕಚೇರಿ ಆಡಿಟೋರಿಯಂನಲ್ಲಿ ಮುಂಜಾನೆಯಿಂದ ವಿವಿಧ ಪೂಜೆ, ಹೋಮ ನಡೆಯುತ್ತಿದೆ. ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬೆಳಗ್ಗೆ 5 ಗಂಟೆಯಿಂದಲೇ ಹೋಮದಲ್ಲಿ ಪಾಲ್ಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರೋ ಹಿನ್ನೆಲೆಯಲ್ಲಿ ಮುಂದೆ ಯಾವುದೇ ವಿಘ್ನಗಳು ಎದುರಾಗದಂತೆ ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಒಟ್ಟು 8 ಬಗೆಯ ಹೋಮ ನಡೆಸಲಾಗಿದೆ.

ವಾಸ್ತು ಹೋಮ, ಗಣಪತಿ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಅಷ್ಟ ಲಕ್ಷ್ಮೀ ಹೋಮ ಸೇರಿದಂತೆ ಒಟ್ಟು 8 ಬಗೆಯ ಹೋಮಗಳು ನೂತನ ಕಚೇರಿಯಲ್ಲಿ ನಡೆಸಲಾಗಿದೆ. ಈ ಪೂಜೆಗಳ ಬಳಿಕ ಅರುಣಾಚಲೇಶ್ವರನ ದರ್ಶನಕ್ಕಾಗಿ ಡಿ. ಕೆ. ಶಿವಕುಮಾರ್ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

ಹೋಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಎಲ್ಲಾ ವಿಘ್ನಗಳ ನಿವಾರಣೆಗಾಗಿ ಹೋಮ ಮಾಡಿಸಲಾಗಿದೆ. ಶುಭ ಮೂಹೂರ್ತದಲ್ಲಿ ಪೂಜೆ ಮಾಡಿದ್ದೇವೆ. ಎರಡು ವರ್ಷಗಳಿಂದ ನೂತನ ಕಚೇರಿಯ ಕಟ್ಟಡದ ಕೆಲಸ ಸ್ಥಗಿತವಾಗಿತ್ತು. ಇದು ಎಲ್ಲರ ಒಳಿತಿಗಾಗಿ ಮಾಡುತ್ತಿರುವ ಹೋಮ ಎಂದರು.