ಮಂಗಳೂರು: ನಗರದ ಹೊರವಲಯದ ಉಳ್ಳಾಲ ನರ್ಸಿಂಗ್ ಕಾಲೇಜಿನಲ್ಲಿ ತಪಾಸಣೆ ನಡೆಸಿದ 49 ವಿದ್ಯಾರ್ಥಿಗಳಿಗೂ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಮೂಲಕ ಕೊರೋನಾ ನಮ್ಮ ಬಳಿಯಿಂದ ಇನ್ನು ದೂರವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಎಚ್ಚರಿಕೆಯಿಂದ ಇರಬೇಕೆಂದು ಸಾರ್ವಜನಿಕರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸೂಚನೆ ನೀಡಿದ್ದಾರೆ.
ಆರ್ಥಿಕ ಚಟುವಟಿಕೆಗಳು ಸಕ್ರಿಯವಾಗಬೇಕೆಂಬ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಒಂದೊಂದಾಗಿ ಸಡಿಲಗೊಳಿಸುತ್ತಾ ಬಂದಿತ್ತು. ಸಾರ್ವಜನಿಕರು ಕೂಡ ಕೊರೊನಾ ಆತಂಕದಿಂದದ ದೂರಾಗಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ವ್ಯವಹಾರಗಳಲ್ಲಿ ಭಾಗವಹಿಸಿದ್ದಾರೆ.
ಸರ್ಕಾರ ಆರೋಗ್ಯ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವಿಕೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸುತ್ತ ಬಂದಿದೆ. ಕೊರೊನಾ ಪ್ರಕರಣ ಕೂಡ ಕ್ಷೀಣಿಸುತ್ತಿರುವ ನಡುವೆಯೇ ಒಂದೇ ಕಡೆ 49 ಪ್ರಕರಣಗಳು ಪತ್ತೆಯಾಗಿರುವುದು ಕೊರೊನಾ ಆತಂಕವನ್ನು ಹೆಚ್ಚಿಸಿದೆ. ಹಾಗಾಗಿ ಆರೋಗ್ಯ ಸಚಿವರು, ಕೋವಿಡ್ ಭಯ ಇನ್ನು ಮುಂದುವರೆದಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.