ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋವೊಂದನ್ನು ಇಟ್ಟುಕೊಂಡು 50 ಲಕ್ಷ ರೂ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ ಆರೋಪ ಕೇಳಿ ಬಂದಿದ್ದು, ಬ್ಲ್ಯಾಕ್ಮೇಲ್ ಮಾಡಿದ್ದ ಜ್ಯೋತಿಷಿಯ ಮೂವರು ಸ್ನೇಹಿತರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ್ ಗುರೂಜಿ ಮತ್ತು ಎಸ್.ಇ. ಸುದೀಂದ್ರ ಅವರ ಕುರಿತಾಗಿ ಕೆಟ್ಟದ್ದಾಗಿ ಚಿತ್ರಿಸಿದ ವಿಡಿಯೋ ತುಣಕನ್ನು ವೈರಲ್ ಮಾಡುವುದಾಗಿ ಬೆದರಿಸಿದ ದುಷ್ಕಮಿಗಳು ಹಣಕ್ಕಾಗಿ ಸುಧೀಂದ್ರನನ್ನು ಪೀಡಿಸಿದ್ದಾರೆ. ಈ ಬಗ್ಗೆ ಸುದೀಂದ್ರರ ಆಪ್ತ ಬಿ.ಆರ್.ನಾಗರಾಜ್ ದೂರು ನೀಡಿದ್ದಾರೆ. ನಾಗರಾಜ್ ಕೊಟ್ಟ ದೂರಿನ ಮೇರೆಗೆ ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಜಿ.ಕೆ. ವೇಲು ಅಲಿಯಾಸ್ ಮಾರ್ಕೆಟ್ ವೇಲು ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.
50 ಲಕ್ಷಕ್ಕೆ ಡಿಮ್ಯಾಂಡ್
ಹಾಯ್ ಸೂರ್ಯ ಪತ್ರಿಕೆ ಪ್ರದಾನ ಸಂಪಾದನ ಜಿ.ಕೆ. ವೇಲು ಅಲಿಯಾಸ್ ಮಾರ್ಕೆಟ್ ವೇಲು ಮತ್ತು ಯುವ ಕರ್ನಾಟಕ ಸಂಘದ ಅಧ್ಯಕ್ಷ ಎ.ಸಿ.ವೆಂಕಟೇಶ್ ಎಂಬುವವರು ಸುಧೀಂದ್ರ ಹಾಗೂ ಆನಂದ್ಗುರೂಜಿ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಸಿದ್ಧಪಡಿಸಿದ್ದು, ಅದರ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಹಾಗೂ ಎಲ್ಲ ಟಿವಿ ಚಾನೆಲ್ಗಳಿಗೂ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಮಾಡದಿರಲು 50 ಲಕ್ಷ ರೂ. ಕೊಡುವಂತೆ ಸುಧೀಂದ್ರಗೆ ಬ್ಲಾಕ್ ಮೇಲ್ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜನವರಿ 28ರಂದು ಗುರೂಜಿ ಆಪ್ತ ನಾಗರಾಜ್ ಬಿ.ಆರ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ವಿರುದ್ಧ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಆರೋಪಿಗಳು ವಾಟ್ಸ್ ಗ್ರೂಪ್ನಲ್ಲಿ ಗುರೂಜಿ ಹಾಗೂ ಸುಧೀಂದ್ರ ಕುರಿತು ಮಾನಹಾನಿ ಸಂದೇಶ ರವಾನಿಸಿ ಈಗಲಾದ್ರೂ ಕನಿಷ್ಠ 26ಲಕ್ಷ ಹಣ ಕೊಡಿ, ಇಲ್ಲವಾದ್ರೆ ಬೇರೆ ವೈಯಕ್ತಿಕ ವಿಷಯಗಳನ್ನ ಹಂತ ಹಂತವಾಗಿ ವೈರಲ್ ಮಾಡುವುದಾಗಿ ಹೇಳಿದ್ದರೂ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈಗ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.