ಕಾರ್ಕಳ: ಇಲ್ಲಿನ ಮಹಿಳೆಯೋರ್ವರಿಗೆ ವ್ಯಕ್ತಿಯೊಬ್ಬ ಸಿಬಿಐ ಸೋಗಿನಲ್ಲಿ ಕರೆ ಮಾಡಿ, ಬೆದರಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ಜ.07 ಮಂಗಳವಾರದಂದು ನಡೆದಿದೆ.
ವಂಚನೆಗೊಳಗಾದ ಮಹಿಳೆ ಪ್ರೀಮ ಶರಿಲ್ ಡಿಸೋಜ (38).
ಅವರಿಗೆ ವ್ಯಕ್ತಿಯೋರ್ವ ಟೆಲಿಕಾಂ ಕಂಪೆನಿಯಿಂದ ಕರೆ ಮಾಡುವುದಾಗಿ ತಿಳಿಸಿದ್ದು, ನಂತರದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುತ್ತದೆ ಎಂದು ಹೆದರಿಸಿದ್ದಾನೆ. ಈ ಸಂಬಂಧ ಸೈಬರ್ ಅಧಿಕಾರಿ ನಿಮ್ಮ ಜತೆಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಆರೋಪಿಯು ವೀಡಿಯೋ ಕಾಲ್ ಮೂಲಕ ಪೊಲೀಸ್ ಸಮವಸ್ತ್ರ ಧರಿಸಿ ಮಾತನಾಡಿದ್ದು, ಈ ವೇಳೆ ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿ ನೀವು ತನಿಖೆಗೆ ಸಹಕರಿಸಬೇಕು. ಈ ವಿಚಾರವನ್ನು ಯಾರ ಬಳಿಯಲ್ಲಿಯೂ ಹೇಳುವಂತಿಲ್ಲ ಹೇಳಿದರೆ ನಿಮ್ಮ ಗಂಡ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೆದರಿಸಿದ್ದಾನೆ. ಇದರಿಂದ ಆತಂಕಗೊಂಡ ಶರಿಲ್ ಅವರು ಆರೋಪಿ ತಿಳಿಸಿದಂತೆ ಆತನ ಖಾತೆಗೆ ಹಣ ವರ್ಗಾಯಿಸಲು ಒಪ್ಪಿದರೆ. ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಅರೆಸ್ಟ್ ವಾರಂಟ್ ಕಳುಹಿಸುತ್ತೇವೆ ಎಂದು ಹೆದರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿಚಾರದಿಂದ ಆತಂಕಗೊಂಡ ಮಹಿಳೆ ಫೆಡರಲ್ ಬ್ಯಾಂಕ್ನ ಖಾತೆಗೆ 14 ಲಕ್ಷ ರೂ. ಮತ್ತು ಯೆಸ್ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಹಣವನ್ನು ಎಫ್ಡಿ ಖಾತೆಯಿಂದ ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.
ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.