ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಮಾಡಿದ್ದ 19 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ.
ಹಣದುಬ್ಬರ, ಜಿಎಸ್ಟಿ ಬೆಲೆ ಏರಿಕೆ ಮತ್ತು ಕಾಂಗ್ರೆಸ್ ಸಂಸದರ ಅಮಾನತು ಮತ್ತು ಇತರ ವಿಷಯಗಳ ಕುರಿತಂತೆ ಸಂಸದರು ಪ್ಲೇ ಕಾರ್ಡ್ ಹಿಡಿದು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಡಾ ಸಂತಾನು ಸೇನ್ ಮತ್ತು ಡೋಲಾ ಸೇನ್ ಸೇರಿದಂತೆ ಹಲವು ಸಂಸದರನ್ನು ವಾರದ ಉಳಿದ ಅವಧಿಗೆ ಸಭಾಪತಿ ಅಮಾನತುಗೊಳಿಸಿದ್ದಾರೆ.
ಇನ್ನುಳಿದಂತೆ ಸಂಸದರಾದ ಮೌಸಂ ನೂರ್, ಶಾಂತ ಚೇಟ್ರಿ, ನದಿಮುಲ್ ಹಖ್, ಅಬೀರ್ ರಂಜನ್ ಬಿಸ್ವಾಸ್, ಡಿಎಂಕೆ ಸಂಸದರಾದ ಕನಿಮೊಳಿ, ಎಂ ಮೊಹಮ್ಮದ್ ಅಬ್ದುಲ್ಲಾ, ಸಿಪಿಐ(ಎಂ)ನ ಎಎ ರಹೀಂ ಅವರನ್ನು ಅಮಾನತು ಮಾಡಲಾಗಿದೆ. ನಿನ್ನೆ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಟಿಎನ್ ಪ್ರತಾಪನ್, ಜೋತಿಮಣಿ ಮತ್ತು ರಮ್ಯಾ ಹರಿದಾಸ್ ಲೋಕಸಭೆಯ ಉಳಿದ ಅವಧಿಗೆ ಅಮಾನತುಗೊಂಡರು. ಉಪಾಧ್ಯಕ್ಷ ಈ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಇದು ‘ಪ್ರಜಾಪ್ರಭುತ್ವದ ಮೇಲೆ ಕಳಂಕ’ ಎಂದು ಬಣ್ಣಿಸಿದೆ.
ಕಳೆದ ವಾರದಿಂದ ಆರಂಭವಾಗಿರುವ ಅಧಿವೇಶನದಲ್ಲಿ ಜಿಎಸ್ ಟಿ ದರ ಏರಿಕೆ, ಹಣದುಬ್ಬರ, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ವಿರೋಧ ಪಕ್ಷದ ಸದಸ್ಯರು ನೋಟಿಸ್ ನೀಡಿದ್ದಾರೆ.