ಪುತ್ತೂರು: ದ.ಕ.ಜಿಲ್ಲೆಯಲ್ಲೇ ಅತಿ ಹೆಚ್ಚು ತಾಲೂಕು ಹೊಂದಿರುವ ಉಪವಿಭಾಗವಾಗಿರುವ ಪುತ್ತೂರಿನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕೊಡುವ ನಿಟ್ಟಿನಲ್ಲಿ ಅಂದಾಜು 180 ಕೋಟಿ ರೂ. ವೆಚ್ಚದಲ್ಲಿ 300 ಬೆಡ್ನ ಆಸ್ಪತ್ರೆಗೆ ನೀಲ ನಕಾಶೆ ಸಿದ್ದಪಡಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಹಾಯಕ ಕಮಿಷನರ್ ಗಿರೀಶ್ ನಂದನ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಇಂಜಿನಿಯರ್ಗಳ ಉಪಸ್ಥಿತಿಯಲ್ಲಿ ನಡೆದ ಸರ್ಕಾರಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕರಿಗೆ ಆರೋಗ್ಯ ಸೇವೆ ಕೊಡುವ ನಿಟ್ಟಿನಲ್ಲಿ 300 ಬೆಡ್ನ ಆಸ್ಪತ್ರೆ ಆಗಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಪ್ರಸ್ತಾವನೆಯನ್ನು ಸ್ವೀಕಾರ ಮಾಡಿದೆ. ಇದಲ್ಲದೆ ಸದನದಲ್ಲೂ ಪ್ರಶ್ನಿಸಿದಾಗ ಸಚಿವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲೇ ಸಭೆ ನಡೆಸಿ ಮಾಹಿತಿ ಪಡೆಯುವುದಾಗಿ ಭರವಸೆ ನೀಡಿದ್ದರು.
ಅದರಂತೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಇಂಜಿನಿಯರ್ಗಳು ಸಭೆಯಲ್ಲಿ ಭಾಗವಹಿಸಿ ಆಸ್ಪತ್ರೆಯ ಜಾಗ ಮತ್ತು ಮುಂದೆ ಲಭ್ಯ ಇರುವ ಸ್ಥಳವಕಾಶದ ಕುರಿತು ಸ್ಪಷ್ಟತೆ ಪಡೆದು ಕೊಂಡಿದ್ದಾರೆ. ಈಗಿರುವ ನೀಲಿ ನಕಾಶೆ ಬದಲಾವಣೆ ಮಾಡಿ ಭೌಗೋಳಿಕವಾಗಿ ಇಲ್ಲಿನ ಸ್ಥಳಕ್ಕೆ ಸರಿಯಾಗಿ ತೀರ್ಮಾನಕ್ಕೆ ಬಂದು ಅಂತಿಮಗೊಳಿಸಲಾಗುವುದು ಎಂದರು.