2010 ಮೇ 22 ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನದಲ್ಲಿ ಸುಮಾರು 166 ಮಂದಿ ಹೊರಟಿದ್ದರು. ಆದರೆ ಅವರ ಅದೃಷ್ಟ ಅಂದು ಕೈಕೊಟ್ಟಿತ್ತು ಅನ್ನಿಸುತ್ತೆ. ವಿಧಿಯ ಆಟಕ್ಕೆ ಅದರಲ್ಲಿದ್ದ 166 ಮಂದಿಯ ಪೈಕಿ 158 ಮಂದಿ ಬಲಿಯಾದರು. ಅನೇಕ ಕನಸುಗಳನ್ನು ಹೊತ್ತು ವಿಮಾನ ಹತ್ತಿದ ಅನೇಕರು ಬೂದಿಯಾಗಿ ಹೋದರು.
ಹೌದು, ದುಬೈಯಿಂದ ಮಂಗಳೂರಿಗೆ ಹೊರಟಿದ್ದ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ವೇಯಿಂದ ಜಾರಿ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತವೇ ನಡೆದು ಹೋಯಿತು. ಈ ಭಾರಿ ದುರಂತ ಸಂಭವಿಸಿ ಇಂದಿಗೆ 10 ವರ್ಷ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಪತನ ದೇಶ ಕಂಡ ಅತಿ ದೊಡ್ಡ ವಿಮಾನ ದುರಂತವಾಗಿದೆ. ದುರಂತದಲ್ಲಿ ಪೈಲಟ್, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.
ತಣ್ಣೀರುಬಾವಿಯ ಪ್ರದೀಪ್ (ಅಂದಿನ ಪ್ರಾಯ 28), ಹಂಪನಕಟ್ಟೆಯ ಮಹಮ್ಮದ್ ಉಸ್ಮಾನ್ (49), ವಾಮಂಜೂರಿನ ಜ್ಯೂಯೆಲ್ ಡಿಸೋಜ (24), ಕೇರಳ ಕಣ್ಣೂರು ಕಂಬಿಲ್ನ ಮಾಹಿನ್ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್ (37), ಉಳ್ಳಾಲದ ಉಮ್ಮರ್ ಫಾರೂಕ್ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ (23) ಬದುಕುಳಿದ ಅದೃಷ್ಟವಂತರು.