ಉಳ್ಳಾಲ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಾದಚಾರಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ ಬಂಡಿಕೊಟ್ಯ, ಗೊಳಿಯಡಿ ರಸ್ತೆಯಾಗಿ ಯುವತಿಯರು, ಕಾಲೇಜ್ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಓಣಿಯಲ್ಲಿ ಬೈಕ್ ನಲ್ಲಿ ಬರುವ ಈ ಬಾಲಕ ಮಹಿಳೆಯರ ಎದೆ ಭಾಗ ಮತ್ತು ಹಿಂಬದಿ ಭಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಕಳೆದ 15 ದಿನಗಳಿಂದ ಮೂರು- ನಾಲ್ಕು ಬಾರಿ ಇಂತಹ ಘಟನೆಗಳು ನಡೆದಿತ್ತು. ಈ ಬಾಲಕನ ಕಿರಿಕಿರಿ ತಾಳಲರದೇ ಯುವತಿಯರು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಮೌಖಿಕ ದೂರನ್ನು ನೀಡಲಾಗಿತ್ತು. ಆದರೆ ಈ ಬಾಲಕನ ಕಿರಿಕಿರಿ ಮಾತ್ರ ನಿಂತಿರಲಿಲ್ಲ.
ಶುಕ್ರವಾರವೂ ಇಂತಹ ಘಟನೆ ನಡೆದಾಗ ಸ್ಥಳೀಯರು 16ರ ಹರೆಯದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಬಂಡಿಕೊಟ್ಯದ ಅಯ್ಯಪ್ಪ ಮಂದಿರದ ಸಮೀಪ ಸೆರೆಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಲೀಸರ ಮುಂದೆ ಈ ಅಪ್ರಾಪ್ತ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.