
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ, ಶಂಕಿತ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಶಯದ ಮೇಲೆ ಉತ್ತರ ಪ್ರದೇಶ ಮೂಲದ 20 ವರ್ಷದ ಸುಹೇಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶೇಖರ್ ಎಚ್.ಟಿ. ಅವರು, ಆರೋಪಿಗೆ ಸದ್ಯಕ್ಕೆ ಯಾವುದೇ ಸಂಘಟನೆಯೊಂದಿಗೆ ನೇರ ಸಂಪರ್ಕವಿರುವುದು ದೃಢಪಟ್ಟಿಲ್ಲ ಮತ್ತು ಪ್ರಕರಣದ ಆರಂಭಿಕ ಹಂತದಲ್ಲೇ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಆತನ ಮೊಬೈಲ್ ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ. ಆತನ ಸಾಮಾಜಿಕ ಜಾಲತಾಣಗಳ ಸಂಪರ್ಕ, ಸಂದೇಶಗಳು ಮತ್ತು ಕರೆ ವಿವರಗಳ ಸಂಪೂರ್ಣ ತಪಾಸಣೆಯ ಬಳಿಕವೇ ಇತರ ವ್ಯಕ್ತಿಗಳೊಂದಿಗೆ ಅಥವಾ ಹಳೆಯ ಪ್ರಕರಣಗಳೊಂದಿಗೆ ಆತನಿಗೆ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಲಿದ್ದು, ತನಿಖೆ ಮುಗಿದ ನಂತರವಷ್ಟೇ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


