ಬೆಳ್ತಂಗಡಿ: ತಂಡವೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ತೆಂಕ ಕಾರಂದೂರು ಗ್ರಾಮದ ಪೆರಾಲ್ದಕಟ್ಟೆ ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ವಿರುದ್ಧ ಹಾಗೂ ಇತರ ಅಪರಿಚಿತರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹೇಶ್, ಸುರೇಶ್, ಅರುಣ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಎ.ಎಸ್.ಐ ರಾಮಯ್ಯ ಹೆಗ್ಡೆ ಅವರು ಯುವಕರ ತಂಡ ಶಿವರಾತ್ರಿಯಂದು ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ತಡ ರಾತ್ರಿ ವೇಳೆ ರಸ್ತೆಯಲ್ಲಿದ್ದ ಯುವಕರನ್ನು ರಸ್ತೆಯಲ್ಲಿ ಸೋಡಾ ಬಾಟ್ಲಿಗಳನ್ನು ಒಡೆದು ಹಾಕಿರುವ ಬಗ್ಗೆ ರಾಮಯ್ಯ ಅವರು ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ತಂಡ ಅವರ ಮೇಲೆ ದಾಳಿ ನಡೆಸಿ, ಅವರನ್ನು ನೆಲಕ್ಕೆ ಹಾಕಿ ತುಳಿದು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ಈ ಬಗ್ಗೆ ರಾಮಯ್ಯ ಅವರು ನೀಡಿರುವ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಮಯ್ಯ ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.