ಉಡುಪಿ: ಪೊಲೀಸರ ವೇತನ ತಾರತಮ್ಯ ಹಾಗೂ ಇತರ ಸಮಸ್ಯೆಗಳನ್ನು ಸುಧಾರಿಸಬೇಕೆಂದು ಪಣತೊಟ್ಟು ಉಡುಪಿಯಿಂದ ಮನವಿಪತ್ರ ಅಭಿಯಾನ ಆರಂಭವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮಾಜಿ ಪೊಲೀಸ್ ಸಂದೀಪ್ ಕುಮಾರ್ ಎಂ, ಈ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಪತ್ರಗಳನ್ನು ಆಯಾ ಕ್ಷೇತ್ರದ ಶಾಸಕರುಗಳಿಗೆ ತಲುಪಿಸುವ ಮೂಲಕ, ಮುಂದಿನ ಚುನಾವಣೆಯ ವೇಳೆಗೆ ನಿರ್ಣಾಯಕ ಘಟ್ಟಕ್ಕೆ ಈ ಹೋರಾಟವನ್ನು ತಲುಪಿಸುವುದಾಗಿ ತಿಳಿಸಿದ್ದಾರೆ.
ಸೇವಾನಿರತ ಹಾಗೂ ನಿವೃತ್ತ ಪೊಲೀಸರಿಗೆ ಇರುವ ವೇತನ ತಾರತಮ್ಯ ಮತ್ತು ಆರೋಗ್ಯ ಭಾಗ್ಯದ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭವಾಗಿದೆ. ಔರಾದ್ಕರ್ ವರದಿಯ ಪ್ರಕಾರ, ಕೆಸಿಎಸ್ಆರ್ ನಿಯಮ 43 ರಂತೆ ಕೇವಲ ಹೊಸದಾಗಿ ಆಯ್ಕೆಯಾಗಿರುವ ಸಿಬ್ಬಂದಿಯವರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಸೇವಾ ನಿರತರಾಗಿರುವ ಹಾಗೂ ಇತರ ನಿವೃತ್ತ ಸಿಬ್ಬಂದಿಗಳಿಗೆ ಇದರಿಂದ ಅನ್ಯಾಯವಾಗಿದೆ. ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು, ಇದರಿಂದ ಸುಮಾರು 1,50,000 ಸೇವಾನಿರತ ಹಾಗೂ ನಿವೃತ್ತ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ಆರೋಗ್ಯ ಭಾಗ್ಯ ಯೋಜನೆಯಲ್ಲಿ, ಇತ್ತೀಚಿನ ನಾಲ್ಕೈದು ವರ್ಷಗಳಿಂದ non medical charges ಎಂಬ ಹೆಸರಿನಲ್ಲಿ, ಆಸ್ಪತ್ರೆ ಬಿಲ್ಲಿನ ಮೊತ್ತದಲ್ಲಿ ಸಿಬ್ಬಂದಿಯಿಂದ ಲಕ್ಷಾಂತರ ಹಣ ವಸೂಲಿ ಮಾಡಲಾಗುತ್ತಿದೆ. ನಿವೃತ್ತರಿಗೆ ಕೇವಲ ಒಂದು ಲಕ್ಷವರೆಗೆ ಹಾಗೂ ಶಸ್ತ್ರಚಿಕಿತ್ಸೆ ಗೆ ಎರಡು ಲಕ್ಷದವರೆಗೆ ಆರೋಗ್ಯಭಾಗ್ಯದ ಕ್ಲೈಮ್ ಆಗುತ್ತಿದೆ. ಇದರಲ್ಲೂ ಅನೇಕ ತೊಡಕುಗಳಿವೆ ಇದನ್ನು ನಿವಾರಣೆ ಮಾಡಬೇಕೆಂದು ಅಭಿಯಾನದ ಮೂಲಕ ಒತ್ತಾಯಿಸಲಾಗುತ್ತಿದೆ.
ಆರ್ಡರ್ಲಿ ಪದ್ಧತಿಯನ್ನು ನಿಷೇಧ ಮಾಡಿದ್ದರೂ, ಆದೇಶ ಇನ್ನೂ ಸರಿಯಾಗಿ ಕಾರ್ಯಗತಗೊಂಡಿಲ್ಲ. ರಾಜ್ಯದಲ್ಲಿ ನೂರಾರು ಸಿಬ್ಬಂದಿಗಳನ್ನು ಮೇಲಾಧಿಕಾರಿಯವರ ಮನೆಯಲ್ಲಿ ಅಡುಗೆ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರ ಬದಲಿಗೆ ಫಾಲೋವರ್ಸ್ ಅಪಾಯಿಂಟ್ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಲಾಗಿದೆ. ಕಳೆದ 5ವರ್ಷಗಳಲ್ಲಿ ಪೊಲೀಸರ ಆತ್ಮಹತ್ಯೆ ಹೆಚ್ಚುತ್ತಿದೆ. ಸುಮಾರು 250 ಸಂಖ್ಯೆ ದಾಟಿದೆ. ಆರ್ಥಿಕ ಸಮಸ್ಯೆ ಮಾನಸಿಕ ಒತ್ತಡ, ವೇತನ ,ಆರೋಗ್ಯ ಸಮಸ್ಯೆ ಇದಕ್ಕೆ ಮೂಲ ಕಾರಣ. ಶೋಷಣೆಯ ಪ್ರತೀಕವಾದ ಆರ್ಡರ್ಲಿ ಪದ್ಧತಿಯನ್ನು ನಿರ್ನಾಮ ಮಾಡಿದರಷ್ಟೇ ಆತ್ಮಹತ್ಯೆ ಕೂಡ ಕಡಿಮೆಯಾಗಬಹುದು ಎಂದು ಈ ಪತ್ರದಲ್ಲಿ ಬರೆಯಲಾಗಿದೆ. ಪೊಲೀಸ್ ಮತ್ತು ಅವರ ಕುಟುಂಬ ಬಂಧುಗಳು ಸೇರಿ ಸುಮಾರು ಐದು ಲಕ್ಷಕ್ಕೂ ಅಧಿಕ ಜನರಿದ್ದಾರೆ. ಇವರನ್ನೆಲ್ಲಾ ಒಳಗೊಂಡು ಈ ಪತ್ರ ಅಭಿಯಾನ ಮಾಡಲಾಗುತ್ತಿದೆ.


