ಮಂಗಳೂರು: ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮಂಗಳೂರು ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ‘ಮಹಿಳಾ ವೈವಿಧ್ಯ ಸಂಭ್ರಮ ಹಾಗೂ ಮಹಿಳಾ ವಾಹನ ಜಾಥಾ’ವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಾಥಾದ ಕುರಿತು ಮಾಹಿತಿ ನೀಡಿದ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ, ‘ಉರ್ವಸ್ಟೋರ್ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಮಾರ್ಚ್ 8 ಶುಕ್ರವಾರದಂದು ಬೆಳಿಗ್ಗೆ 9ಕ್ಕೆ ಮಹಿಳಾ ವಾಹನಾ ಜಾಥಾ ಆರಂಭಗೊಳ್ಳಲಿದೆ. ಎಸಿಪಿ ಡಿ. ಗೀತಾ ಕುಲಕರ್ಣಿ ಹಾಗೂ ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಮಹಿಳಾ ವೈವಿಧ್ಯ ಸಂಭ್ರಮವನ್ನು ಆಯೋಜಿಸಲಾಗಿದ್ದು, ಮುಂಬೈನ ಸರ್ಕಾರಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಉದ್ಘಾಟಿಸುವರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಉಪಸಭಾಪತಿ ಭಾರತಿ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ್ ಕಾಮತ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಕ್ಷಾ ಭಟ್, ಸಂಜನಾ ಭಾಗವಹಿಸಲಿದ್ದಾರೆ’ ಎಂದರು.
ಇನ್ನು ಈ ಮಹಿಳಾ ಜಾಥಾವು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಆರಂಭವಾಗಲಿದ್ದು, ಈ ಮಹಿಳಾ ಜಾಥಾದಲ್ಲಿ ಸೈಕಲ್, ದ್ವಿಚಕ್ರವಾಹನ, ರಿಕ್ಷಾ, ಆ್ಯಂಬುಲೆನ್ಸ್, ಕಾರು, ಬಸ್, ಟ್ರಕ್ಗಳನ್ನು ಮಹಿಳೆಯರೇ ಚಲಾಯಿಸಿಕೊಂಡು ಬರಲಿದ್ದಾರೆ. ಕೆಲವರು ಕುದುರೆಯನ್ನೇರಿ ಬರಲಿದ್ದಾರೆ. ಮಹಿಳೆಯರ ಚೆಂಡೆ ತಂಡ, ನಾಸಿಕ್ ಬ್ಯಾಂಡ್, ಮಹಿಳಾ ಕಲಾತಂಡಗಳು ಭಾಗವಹಿಸಲಿವೆ. ‘ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಮನೋರಮಾ ಉಮೇಶನ್, ಕಾರ್ಯದರ್ಶಿ ರೇಖಾ ಶೆಟ್ಟಿ, ಖಜಾಂಜಿ ಭಾರತಿ ಎಂ., ಕ್ರೀಡಾ ಕಾರ್ಯದರ್ಶಿ ಶುಭಾ ರೈ ಭಾಗವಹಿಸಿದ್ದರು.