ಮಂಗಳೂರು: ಸಾಮಾಜಿಕ ಕಾರ್ಯಕರ್ತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ರಾಜೇಶ್ವರಿ (36) ಎಂಬವರು ಸೆ.8ರಿಂದ ಕಾಣೆಯಾಗಿದ್ದಾರೆ ಎಂದು ಅವರ ಪತಿ ರಾಜಕುಮಾರ್ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ಜೆಸಿಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾರೆ. ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಸೆ.8ರಂದು ರಾತ್ರಿ 7.30ಕ್ಕೆ ನಗರದ ಸ್ಟೇಟ್ಬ್ಯಾಂಕ್ ಹತ್ತಿರದ ಮೀನು ಮಾರ್ಕೆಟ್ಗೆ ಹೆಂಡತಿ ಜೊತೆ ಹೋಗಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದ ಪತ್ನಿ ಮರಳಿ ಬಂದಿಲ್ಲ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮೊಬೈಲ್ ಪೋನನ್ನು ತನ್ನ ಬ್ಯಾಗಿನಲ್ಲಿ ಹಾಕಿ ಹೋಗಿರುತ್ತಾಳೆ ಎಂದು ಅವರು ತಿಳಿಸಿದ್ದಾರೆ.
5 ಅಡಿ ಎತ್ತರದ, ಬಿಳಿ ಮೈಬಣ್ಣದ ರಾಜೇಶ್ವರಿ ಪಿಂಕ್ ಬಣ್ಣದ ಚೂಡಿದಾರ್, ಲೆಗ್ಗಿನ್ಸ್ ಮತ್ತು ಹಳದಿ ಬಣ್ಣದ ಶಾಲ್ ಧರಿಸಿರುತ್ತಾಳೆ. ಕನ್ನಡ, ತುಳು, ಮಲೆಯಾಳಂ, ಹಿಂದಿ ಭಾಷೆ ಮಾತನಾಡುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಜಕುಮಾರ್ ತಿಳಿಸಿದ್ದಾರೆ.