ಮಂಗಳೂರು: ಸೆಪ್ಟೆಂಬರ್ 2 ರಂದು ಮೋದಿ ಆಗಮನದ ಹಿನ್ನೆಲೆಯಲ್ಲಿ ಮೋದಿ ಅವರು ಸಂಚರಿಸಲು ಕೂಳೂರು ಸೇತುವೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದ್ರೆ ಇನ್ನೂ ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಲೇ ಈ ರಸ್ತೆಯಲ್ಲಿ ಗುಂಡಿಬಿದ್ದು ಕಳಪೆ ಕಾಮಗಾರಿ ಪ್ರದರ್ಶನವಾಗಿದೆ.
ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ ಕಳಪೆ ಕಾಮಗಾರಿ ಬಗ್ಗೆ ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ನಲ್ಲಿ ಹೊಸದಾಗಿ ಹಾಕಲಾದ ಬಿಟುಮೆನ್ ಡಾಂಬರು ಕೇವಲ ಬರೀ 10 ದಿನಗಳ ಕಾಲ ಬಾಳಿಕೆ ಬಂದಿದೆ. ಪ್ರಧಾನಿಯವರ ಆಗಮನದ ಕೆಲವೇ ದಿನಗಳ ಮೊದಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನವಮಂಗಳೂರು ಬಂದರು ಮತ್ತು ಕೂಳೂರು ನಡುವಿನ ಸಂಪೂರ್ಣ ರಸ್ತೆಯನ್ನು ಗುಂಡಿಗಳನ್ನು ಮುಚ್ಚುವ ಮತ್ತು ಡಾಂಬರೀಕರಣ ಮಾಡುವ ಕಾರ್ಯಾಚರಣೆಯನ್ನು ನಡೆಸಿದ್ದರು. ದಶಕಗಳಷ್ಟು ಹಳೆಯದಾದ ಕೂಳೂರು ಸೇತುವೆಗೂ ಹೊಸ ಬಣ್ಣವನ್ನು ಹೊಡೆಯಲಾಗಿತ್ತು. ಆದ್ರೆ ತಿಂಗಳು ಕಳೆಯೋದ್ರೊಳಗೆ ರಸ್ತೆಯ ಕಳಪೆ ಮುಖ ಬಯಲಾಗಿದೆ.