ಚಿಕ್ಕಮಗಳೂರು: ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಮೃತದೇಹವನ್ನು ಅರ್ಧ ಕಿ.ಮೀ. ಎಳೆದೊಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. 52 ವರ್ಷದ ಆನಂದ್ ದೇವಾಡಿಗ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿದೆ.
ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸುವನ್ನು ಹುಡುಕಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ದಾಳಿ ಮಾಡಿದ ಕಾಡಾನೆ ಸುಮಾರು ಅರ್ಧ ಕಿ.ಮೀ ಗಿಂತಲೂ ಹೆಚ್ಚು ದೂರ ಮೃತ ದೇಹವನ್ನು ಎಳೆದೊಯ್ದಿದೆ. ಕಾಡಿನ ಒಳಗೆ ಮೃತ ಆನಂದ್ ಅವರ ದೇಹದ ಅಂಗಾಗಗಳು ಕಾಡಿನ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲೆ ಬಿದ್ದಿವೆ.
ಮೃತದೇಹ ಇರುವ ಜಾಗಕ್ಕೂ ಚಪ್ಪಲಿ ಇರುವ ಜಾಗಕ್ಕೂ ಸುಮಾರು ಅರ್ಧ ಕಿ.ಮೀ ದೂರವಿದೆ. ಅಷ್ಟೆ ಅಲ್ಲದೆ ತಲೆ ಮೆದುಳು, ಮೂಳೆಯೂ ಒಂದೊಂದು ಜಾಗದಲ್ಲಿ ಬಿದ್ದಿದೆ. ಮೃತದೇಹವನ್ನ ಕಾಡಿನಲ್ಲಿ ಎಳೆದು ತಂದಿರುವುದರಿಂದ ಕಾಡಿನ ಮರಗಿಡಗಳಿಗೆ ಸಿಲುಕಿ ಮೃತದೇಹದ ಮೇಲೆ ಯಾವುದೇ ಬಟ್ಟೆ ಇಲ್ಲದಂತಾಗಿದೆ. ಛಿದ್ರವಾಗಿರುವ ಮೃತದೇಹವನ್ನ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.