ಬಂಟ್ವಾಳ : ತಾಲೂಕಿನ ಅನಂತಾಡಿ ಮತ್ತು ಮಾಣಿ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು ಸ್ತಳೀಯ ಕೃಷಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಲಭ್ಯ ವಾಗಿದೆ.
ಅನಂತಾಡಿ ಗ್ರಾಮದಲ್ಲಿ ಕೆಲವು ದಿನಗಳಿಂದ ಕಾಡು ಪ್ರಾಣಿಗಳ ಬೀಕರ ಹಾವಳಿ ಆಗುತ್ತಿದ್ದು ಇಲ್ಲಿನ ನೇಲ್ತೋಟ್ಟು ,ಕೊಂಗಲಾಯಿ ,ತಾಕೋಟೇ ಮಾರ್ ,ತುಂಬೆಕೋಡಿ ,ಪೂಂಜಾವ್ ಪ್ರದೇಶದಲ್ಲಿ ಭತ್ತ,ಅಡಿಕೆ, ತರಕಾರಿ ಬೆಳೆಗಳನ್ನು ಬೆಳೆಯುವ ಕೃಷಿಕರ ಭೂಮಿಗೆ ಸುಳ್ಳಮಲೆಯ ರಕ್ಷಿತಾರಣ್ಯ ದಿಂದ ಕಾಡುಕೋಣ( ಕಾಟಿ) ಉಪದ್ರವ ಹೆಚ್ಚಾಗಿದೆ.ಇದರಿಂದ ರೈತರಿಗೆ ಕೃಷಿ ನಾಶ ಮಾತ್ರ ಅಲ್ಲದೆ ಸುಮಾರು ನೂರಕ್ಕೂ ಅಧಿಕ ಮನೆಯ ಜನರಿಗೆ ಕಾಡುಕೋಣ ಗಳ ಹಾವಳಿಯಿಂದ ಒಬ್ಬೊಬ್ಬರು ಪ್ರಾಣ ಭೀತಿಯಿಂದ ನಡೆದಾಡಲು ಕೂಡ ಹೆದರುವಂತಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅನಂತಾಡಿ ಗ್ರಾಮದ ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅದೇ ರೀತಿ ಮಾಣಿ ಗ್ರಾಮದಲ್ಲಿ ಬಾಯಿಲ, ಗೋಳಿಮಾರ್, ಶಂಭುಗ, ಪಳ್ಳತ್ತಿಲ,ಬಾಬುಕೋಡಿ, ವಾರಾಟ, ಕಂಬ್ಳ ಮೊದಲಾದ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ಕಾಡುಕೋಣಗಳ ಹಾವಳಿ ಇದೆ .ಬಾಬುಕೋಡಿ ಮತ್ತು ವಾರಾಟ ದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ.ಮಾತ್ರವಲ್ಲದೆ ಉಭಯ ಗ್ರಾಮದಲ್ಲಿ ಕಾಡುಹಂದಿ,ನವಿಲು ಮೊದಲಾದ ಪ್ರಾಣಿಗಳ ಕೃಷಿಭೂಮಿಗೆ ಲಗ್ಗೆ ಇಡುವುದು ತೀರಾ ಸಾಮಾನ್ಯವಾಗಿದೆ.
ಕಾಡು ಪ್ರಾಣಿಗಳ ಹಾವಳಿಯಿಂದ ಜನರ ಕೃಷಿ ನಾಶ ಅವ್ಯಾಹತವಾಗಿ ಆಗುತ್ತಿದ್ದು ಒಂದು ವೇಳೆ ಜನರ ಪ್ರಾಣಹಾನಿಯಾದರೆ ಯಾರು ಹೊಣೆ? ಆದ್ದರಿಂದ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಡುಪ್ರಾಣಿಗಳ ಹಾವಳಿಗೆ ಸೂಕ್ತವಾದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಅನಂತಾಡಿ ಮತ್ತು ಮಾಣಿ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.