ಬೆಳಗಾವಿ: ಟಿಕೆಟ್ ಸಿಗದೇ ಇರೋದಕ್ಕೆ ನಾನು ಪಕ್ಷ ಬಿಡ್ತಿಲ್ಲ. ನಾನು ಪಕ್ಷ ಬಿಡುತ್ತಿರುವುದಕ್ಕೆ ಪಕ್ಷದ ಮುಖಂಡರ ನಿರ್ಲಕ್ಷ್ಯ ಕಾರಣ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಇಂದು ಬೆಳಗಾವಿಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಬಿಜೆಪಿಯ ಅನೇಕ ಮುಖಂಡರು ನಿರ್ಲಕ್ಷ್ಯ ಮಾಡಿದ್ದರಿಂದ ಬೇಸರವಾಗಿದೆ. ಇದು ನನಗೆ ಬೇಸರ, ನೋವು ತರಿಸಿದೆ. ಅಲ್ಲದೇ ಪಕ್ಷದಲ್ಲಿ ಇರೋದಕ್ಕೆ ಹಿಂಸೆಯಾಗುತ್ತಿದೆ. ಈವರೆಗೆ ಇದನ್ನೆಲ್ಲಾ ಸಹಿಸಿಕೊಂಡು ಬಿಜೆಪಿ ನನ್ನ ತಾಯಿ ಎಂದು ಸುಮ್ಮನೇ ಇದ್ದೆ ಎಂದರು.
ನಾನು ಈವರೆಗೆ ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ನನಗೆ ಯಾವುದೇ ಸೂಚನೆ ಇಲ್ಲದೇ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ರು. ನಾನು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಕೂಡ ಮಾಡಿಲ್ಲ. ಇದರ ನಡುವೆಯೂ ನನ್ನನ್ನು ಕಡೆಗಣಿಸಿದ್ರು. ಇದೇ ಬೇಸರ ತಂದಿದೆ ಎಂದಿದ್ದಾರೆ.
ನನಗೆ ಪಕ್ಷದ ನಾಯಕರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ಹೀಗಾಗಿ ಬಿಜೆಪಿ ಪಕ್ಷವನ್ನು ತೊರೆಯಲು ನಿರ್ಧಾರ ಮಾಡಿದ್ದೇನೆ. ನಾಳೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.