ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಯಾಕೆ ಸಿಕ್ಕಿಲ್ಲ?.. ಅವರು ಅಭಿವೃದ್ದಿ ವಿಚಾರದಲ್ಲಿ ದೇಶದಲ್ಲೆ ನಂ1 ಸಂಸದ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದರು, ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಅಭಯ ಚಂದ್ರ ಜೈನ್ ಶನಿವಾರದಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಕಾಂಗ್ರೆಸ್ ಕಾಲದಲ್ಲಿ ಮಾತ್ರ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸಗಳು ನಡೆದಿವೆ. ಕಾಂಗ್ರೆಸ್ ಕಾಲದಲ್ಲಿ ಆರಂಭವಾಗಿದ್ದ ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕೂಡ ಬಿಜೆಪಿಯವರಿಂದ ಸಾಧ್ಯವಾಗಿಲ್ಲ. ನಳಿನ್ ಸಂಸದರಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಕೇವಲ ಪ್ರಚಾರ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಗೆಲ್ಲುತ್ತಿದೆ. ಜನಸಾಮಾನ್ಯರಿಗೆ ಯಾವುದೆ ಅನುಕೂಲ ಮಾಡಿಕೊಟ್ಟಿಲ್ಲ,’ ಎಂದರು.
‘ಆದರೆ ಇದೀಗ ಕಾಂಗ್ರೆಸ್ ಮಾಡಿದಂತಹ ಕೆಲಸ ಕಾರ್ಯಗಳ ಕಡೆ ಜನ ಗಮನ ಕೊಡುತ್ತಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬೆಲೆ ಹೆಚ್ಚಳ, ಜಿಎಸ್ ಟಿ ಮೊದಲಾದವುಗಳಿಂದ ಜನ ಸಂಕಷ್ಟದಲ್ಲಿದ್ದರೆ ಪ್ರಧಾನಿ ಮೋದಿ, ಬಿಜೆಪಿಯವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಯುವಕರು ಮೋದಿಯ ಭಾಷಣಕ್ಕೆ ಮರುಳಾಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ತಿಳಿಸಬೇಕಾಗಿದೆ,’ ಎಂದರು.
ಈ ಸಂದರ್ಭದಲ್ಲಿ ಪರ್ತಕರ್ತರು ಮೊಯಿಲಿಯವರಿಗೆ ಈ ಬಾರಿ ಟಿಕೆಟ್ ಸಿಗದಿರುವ ಕುರಿತ ಪ್ರಶ್ನೆ ಕೇಳಿದ್ದು, ಪ್ರಶ್ನೆಗೆ ಉತ್ತರಿಸಿದ ಅವರು, ‘ವಯಸ್ಸಿನ ಕಾರಣಕ್ಕೆ ಮೊಯಿಲಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಅವರಲ್ಲಿ ಜಾತಿ, ಹಣ ಬಲವೂ ಇಲ್ಲ.ಆದರೆ ಅವರಲ್ಲಿ ಇನ್ನೂ ಕೂಡ ಕೆಲಸ ಮಾಡುವ ಶಕ್ತಿ, ಹುಮ್ಮಸ್ಸು ಇದೆ,’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶುಭೋದಯ ಆಳ್ವ, ನೀರಜ್ ಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.