
ವಿಟ್ಲ : ಬಸ್ಸಿನಲ್ಲಿ ಹೋಗುತ್ತಿದ್ದಾಗ ಮಹಿಳೆಯ ಬ್ಯಾಗಿನಲ್ಲಿದ್ದ 138 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಮಡ್ಯಂಗಲ ಚಂದ್ರಹಾಸ ಅವರ ಪತ್ನಿ ಮಾಲತಿ ಎಂಬವರು ಚಿನ್ನಾಭರಣ ಕಳೆದುಕೊಂಡವರು. ಮಾಲತಿ ಅವರು ಕುಡ್ತಮುಗೇರಿನಲ್ಲಿರುವ ತನ್ನ ತಾಯಿ ಮನೆಯಲ್ಲಿ ಚಿನ್ನಾಭರಣಗಳನ್ನು ಇಡಲು ಆಗಮಿಸುತ್ತಿದ್ದಾಗ ಕಳ್ಳತನ ನಡೆದಿದೆ ಎನ್ನಲಾಗಿದೆ.
ಮಾಲತಿ ಅವರು ಲಕ್ಷ್ಮೀ ಪದಕ ಇರುವ 56 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಲಕ್ಷ್ಮಿ ಪದಕ ಇರುವ ಸುಮಾರು 56 ಗ್ರಾಂ ಮತ್ತು 26 ಗ್ರಾಂ ತೂಕದ ಚಿನ್ನದ ಎರಡು ಸರಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಜೂ.27ರಂದು ಬೆಳಗ್ಗೆ 11-30ಕ್ಕೆ ಮನೆಯಿಂದ ಹೊರಟು ಅರಿಯಡ್ಕ ಗ್ರಾಮದ ಶೇಖಮಲೆ ಬಸ್ಸ್ಟಾಂಡಿನವರೆಗೆ ಅಟೋರಿಕ್ಷಾದಲ್ಲಿ ಬಂದು, ಅಲ್ಲಿಂದ ಇನ್ನೊಂದು ಅಟೋರಿಕ್ಷಾದಲ್ಲಿ ಪುತ್ತೂರುವರೆಗೆ ಬಂದು, ಅಲ್ಲಿಂದ ಅಟೋರಿಕ್ಷಾದಲ್ಲಿ ಪುತ್ತೂರಿನ ಕ್ಲಿನಿಕ್ಗೆ ತೆರಳಿ, ಪುತ್ತೂರು ಬಸ್ ನಿಲ್ದಾಣಕ್ಕೆ ಬಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಧ್ಯಾಹ್ನ 1-29 ಗಂಟೆಗೆ ಹತ್ತಿ, ಮಧ್ಯಾಹ್ನ 2-05 ಗಂಟೆಗೆ ವಿಟ್ಲ ಖಾಸಗಿ ಬಸ್ ನಿಲ್ದಾಣಕ್ಕೆ ತಲುಪಿ, ಬಸ್ಸಿನಿಂದ ಇಳಿದಾಗ ಮಾಲತಿ ಅವರ ಬ್ಯಾಗ್ ತೆರೆದಿತ್ತು.
ಪರಿಶೀಲಿಸಿದಾಗ ಅದರಲ್ಲಿ ಒಟ್ಟು 138 ಗ್ರಾಂ ತೂಕದ 16,56,000/- ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹಲವರಲ್ಲಿ ಪರಸ್ಪರ ವಿಚಾರಿಸಿ, ಚರ್ಚಿಸಿ, ವಿಟ್ಲ ಠಾಣೆಗೆ ಆಕೆ ದೂರು ನೀಡುವಾಗ ತಡವಾಗಿದ್ದು ಇದೀಗ ಪ್ರಕರಣ ದಾಖಲಾಗಿದೆ.


