Thursday, June 25, 2026
Homeಕರಾವಳಿಮೂವರು ಮಹಾರಾಷ್ಟ್ರ ಮೂಲದ ನಿರಾಶ್ರಿತರಿಗೆ ವಿಟ್ಲದಲ್ಲಿ ಆಶ್ರಯ

ಮೂವರು ಮಹಾರಾಷ್ಟ್ರ ಮೂಲದ ನಿರಾಶ್ರಿತರಿಗೆ ವಿಟ್ಲದಲ್ಲಿ ಆಶ್ರಯ

- Advertisement -
- Advertisement -

ವಿಟ್ಲ: ದೇಶದಾದ್ಯಂತ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಮೂವರು ನಿರಾಶ್ರಿತ ಮಹಿಳೆಯರು ಕಾಲ್ನಡಿಗೆ ಮೂಲಕ ವಿಟ್ಲ ಪರಿಸರಕ್ಕೆ ಅಗಮಿಸಿದ್ದು, ವಿಟ್ಲ ಎಸ್‍ಐ ವಿನೋದ್ ಕುಮಾರ್ ರೆಡ್ಡಿ ಅವರು ಮೂವರು ಮಹಿಳೆಯರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಆಶ್ರಯ ಕಲ್ಪಿಸಿದ್ದಾರೆ.
ಮಹಾರಾಷ್ಟ್ರದ ರಾಜ್ಯದ ನಾಸಿಕ್ ಎಂಬಲ್ಲಿಯ ಇಬ್ಬರು ವೃದ್ಧೆಯರು ಹಾಗೂ ಒಬ್ಬಳು ಮಹಿಳೆ ಸೇರಿದಂತೆ ಮೂವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರೈಲು ಹಾಗೂ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಾಲ್ನಡಿಗೆ ಮೂಲಕ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ಸಾಲೆತ್ತೂರು ಮೂಲಕ ಕೊಡಂಗಾಯಿ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಡಂಗಾಯಿ ಯುವಕರು ವಿಟ್ಲ ಎಸ್‍ಐ ವಿನೋದ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿದ ಎಸ್‍ಐ ಮೂವರನ್ನು ವಿಚಾರಿಸಿದ್ದಾರೆ. ಅವರನ್ನು ಫ್ರೆಂಡ್ಸ್ ವಿಟ್ಲ ಆಂಬ್ಯುಲೆನ್ಸ್‍ನಲ್ಲಿ ವಿಟ್ಲಕ್ಕೆ ಕರೆ ತಂದು ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರ ಮುಖಾಂತರ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಆಸ್ಪತ್ರೆಗೆ ಭೇಟಿ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅವರನ್ನು ಮಂಗಳೂರಿಗೆ ವರ್ಗಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ದಿವಾಕರ, ಸಿಬ್ಬಂದಿ ಚಂದ್ರಶೇಖರ ವರ್ಮ, ಬಶೀರ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವೇದಾವತಿ ಬಲ್ಲಾಳ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!