
ವಿಟ್ಲ: ಇಲ್ಲಿನ ಇಡ್ಕಿದು ಗ್ರಾಮದ ಕೊಡಂಗೆಯ ಮನೆಯೊಂದಕ್ಕೆ ತಡರಾತ್ರಿ ನುಗ್ಗಿದ ದರೋಡೆಕೋರರ ತಂಡವೊಂದು ವೃದ್ಧರ ಕುತ್ತಿಗೆಯಿಂದ ರೂ. 2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಪಕ್ಕದ ಕೊಡಂಚಪಾಲು ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೂ ಕಳ್ಳತನವಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಕೃತ್ಯಗಳನ್ನು ಒಂದೇ ತಂಡ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕೋಲ್ಪೆ ಕೊಡಂಗೆ ನಿವಾಸಿ ಡಾ. ಸೂರ್ಯನಾರಾಯಣ ಭಟ್ (79) ಅವರು ಜುಲೈ 25ರಂದು ತಡರಾತ್ರಿ ತಳ ಅಂತಸ್ಥಿನಲ್ಲಿ ಮಲಗಿದ್ದಾಗ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು, ಅವರ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ.
ಇದೇ ವೇಳೆ, ಇಡ್ಕಿದು ಕೊಡಂಚಪಾಲು ನಿವಾಸಿ ಆನಂದ ಸಪಲ್ಯ (53) ಎಂಬವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವು ಜುಲೈ 26ರಂದು ಬೆಳಿಗ್ಗೆ ಕಳವಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಎಸ್ಪಿ ಡಾ. ಅರುಣ್ ಕೆ., ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಯಶ್ ಕುಮಾರ್ ಶರ್ಮ, ವಿಟ್ಲ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಉಪನಿರೀಕ್ಷಕ ರಾಮಕೃಷ್ಣ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.


