ಬೆಂಗಳೂರು: ಪುತ್ತೂರಿನ ಯುವತಿಗೆ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಪ್ರೇಮ ವಿವಾಹದ ಆಮಿಷವೊಡ್ಡಿ ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶವನ್ನು ಆರೋಪಿ ಧಿಕ್ಕರಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆರೋಪಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ಪಿ. ನಂಜುಂಡಿ ಮಾತನಾಡಿ, “ಕೃಷ್ಣ ಜೆ. ರಾವ್ ಎನ್ನುವವರು ಸಮುದಾಯದ ಯುವತಿ ಮೇಲೆ ಅತ್ಯಚಾರವೆಸಗಿ ಒಂದು ಗಂಡು ಮಗುವಿನ ಹುಟ್ಟಿಗೆ ಕಾರಣರಾಗಿದ್ದಾರೆ. ಈ ಸಂಬಂಧ ಹೈ ಕೋರ್ಟ್ ನೀಡಿದ ಆದೇಶವನ್ನು ಆರೋಪಿ ಧಿಕ್ಕರಿಸಿದ್ದಾರೆ ಎಂದು ದೂರಿದರು.
ಎ.24 ರಂದು ಉಚ್ಚ ನ್ಯಾಯಾಲಯವು ಆರೋಪಿಗೆ ಮಧ್ಯಾಂತರ ತಡೆಯನ್ನು ಷರತ್ತುಗೊಳಪಟ್ಟು ಆದೇಶ ನೀಡಿದೆ. ನ್ಯಾಯಾಲಯದ ಷರತ್ತಿನ ಪ್ರಕಾರ ಅಂತಿಮ ತೀರ್ಪು ಬರುವವರೆಗೂ ಆರೋಪಿ ಸಂತ್ರಸ್ತೆ ಯುವತಿ ಹಾಗೂ ಮಗುವಿಗೆ ಪ್ರತಿ ತಿಂಗಳು ಒಟ್ಟು 75 ಸಾವಿರ ರೂ. ನೀಡಬೇಕೆಂದು ಆದೇಶಿಸಿತ್ತು. ಮೇ 1 ರಂದು ನೀಡಬೇಕಾದ 75 ಸಾವಿರ ರೂ.ಗಳನ್ನು ಇಲ್ಲಿಯವರೆಗೆ ನೀಡದೇ ಹೈ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿ ಗೋಷ್ಠಿಯಲ್ಲಿ ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ದೊಡ್ಡೆಂದ್ರ ಸ್ವಾಮೀಜಿ, ಶ್ರೀ ಗಣೇಶ ಸ್ವಾಮೀಜಿ, ಆರ್. ಪ್ರಸನ್ನ ಕುಮಾರ್, ಜಿ. ರವಿಕುಮಾರ್ ಇದ್ದರು.


