ಬಳ್ಳಾರಿ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಎರಡು ಇನ್ನೊವಾ ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ನೀರಾವರಿ ಆಯೋಗದಲ್ಲಿ ನಿರ್ದೇಶಕರಾಗಿರುವ ಬೆಂಗಳೂರಿನ ರಾಮಸ್ವಾಮಿ (50), ಜಿತೇಂದ್ರ (50) ಹಾಗೂ ತಿಪಟೂರಿನ ಕಾವ್ಯ (30), ಶರಣಬಸವ (10) ಮೃತರು. ಸರ್ಕಾರಿ ಇನ್ನೊವಾ ಕಾರಿನ ಚಾಲಕ ಅನ್ವರ್, ಮತ್ತೊಂದು ಕಾರಿನ ಚಾಲಕ ಗಿರೀಶ್, ಶಿವಲೀಲಾ, ಸಿದ್ದಲಿಂಗೇಶ್, ಸುವರ್ಣ, ಮಂಜುಶ್ರೀ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ.
ಬುಧವಾರ ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಈ ಇಬ್ಬರು ಅಧಿಕಾರಿಗಳು, ರಾತ್ರಿ ಆಲಮಟ್ಟಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು. ಗುರುವಾರ 7 ಗಂಟೆಗೆ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಾನಿಕ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದ್ದರು. ಜಲಾಶಯ ಪರಿಶೀಲನೆ ಬಳಿಕ ಉಪಹಾರ ಸೇವಿಸಿ ಬೆಳಗ್ಗೆ 9 ಗಂಟೆಗೆ ಆಲಮಟ್ಟಿಯಿಂದ ಬೆಂಗಳೂರಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಹೊಸಪೇಟೆ ದಾಟಿದ ಬಳಿಕ ಮರಿಯಮ್ಮನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಹೊಡೆದು, ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಕೆಬಿಜೆಎನ್ಎಲ್ ಬೆಂಗಳೂರು ಕಛೇರಿ ಚಾಲಕ ಅನ್ವರ್ ಹುಸೇನ್ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎದುರಿನಿಂದ ಢಿಕ್ಕಿ ಹೊಡೆದಿರುವ ವಾಹನದಲ್ಲಿ ಇದ್ದವರಲ್ಲಿ ಇಬ್ಬರು ಮೃತಪಟ್ಟಿದ್ದು, ತೀವ್ರ ಗಾಯಗೊಂಡಿರುವ ಐವರನ್ನು ಬಳ್ಳಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.