ಉಡುಪಿ: ಆ.21ರಿಂದ 30ರವರೆಗೆ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ವಿದುಷಿ ದೀಕ್ಷಾ ಅವರಿಗೆ ಆಗಸ್ಟ್ 30 ರಂದು ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೀಕ್ಷಾ ಅವರನ್ನು ಗೌರವಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಹಲವು ಭಾರೀ ನಾನು ಉಡುಪಿಗೆ ಭೇಟಿ ನೀಡಲು ಬಯಸಿದ್ದು, ಇಂದು ನನ್ನ ಸ್ನೇಹಿತ ರಘುಪತಿ ಭಟ್ ಅವರಿಂದ ದೀಕ್ಷಾ ಅವರ ಈ ಸಾಧನೆಯ ಬಗ್ಗೆ ಕೇಳಿ ಇಲ್ಲಿಗೆ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಶುಭ ಹಾರೈಸಲು ನಾನು ಸಂತೋಷಪಡುತ್ತೇನೆ. ಅವರು ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ” ಎಂದರು.
ಸನ್ಮಾನ ಸಮಾರಂಭವನ್ನು ಉದ್ಘಾಟಿಸಿದ ನಾಡೋಜ ಡಾ. ಜಿ. ಶಂಕರ್ ಅವರು ದೀಕ್ಷಾ ಅವರ ಪ್ರಯತ್ನವನ್ನು ಶ್ಲಾಘಿಸಿ ಮಾತನಾಡುತ್ತಾ, “ನಾನು ದೀಕ್ಷಾ ಅವರು ಪಟ್ಟಿರುವ ಅಪಾರ ಶ್ರಮವನ್ನು ನೋಡಿ ಭಾವುಕನಾದೆ. ರಾಹುಲ್ ಪ್ರತಿ ಹಂತದಲ್ಲೂ ಅವರೊಂದಿಗೆ ನಿಂತು ಉತ್ತಮ ಬೆಂಬಲ ನೀಡಿದರು. ಅವರ ಯಶಸ್ಸಿನ ಬಗ್ಗೆ ನಮಗೆ ವಿಶ್ವಾಸವಿತ್ತು. ಅವರು ಉಡುಪಿಗೆ ಹೆಮ್ಮೆ ತಂದಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ವಿದುಷಿ ದೀಕ್ಷಾ ಅವರು ಭಾವುಕರಾಗಿ, “ದೇವರ ಆಶೀರ್ವಾದವಿಲ್ಲದೆ ಈ ಸಾಧನೆ ಅಸಾಧ್ಯ. ನಾನು ಕುಳಿತುಕೊಳ್ಳಲು ಅಥವಾ ವಿಶ್ರಾಂತಿ ಪಡೆಯಲು ಮಾಧ್ಯಮಗಳು ದಿನವಿಡೀ ನನ್ನನ್ನು ಕವರ್ ಮಾಡಿದ್ದರಿಂದ ಸಾಧ್ಯವಾಗಲಿಲ್ಲ. ಇದರಿಂದಾಗಿ ನಾನು ದಣಿದಿದ್ದೆ. ಆದರೆ ಈ ದಣಿವು ಭಾರೀ ಮೂರು ದಿನ ಮಾತ್ರವಿದ್ದು, ನಂತರ, ನಾನು ಅದಕ್ಕೆ ಹೊಂದಿಕೊಂಡೆ” ಎಂದು ಹೇಳಿದರು.
ತಾತ್ಕಾಲಿಕ ಪ್ರಮಾಣಪತ್ರವನ್ನು ವಿದುಷಿ ದೀಕ್ಷಾ ಅವರಿಗೆ ನೀಡಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾ ಮುಖ್ಯಸ್ಥ ಮನೀಷ್ ಬಿಷ್ಣೋಯ್ ಮಾತನಾಡಿ, “ಇದು ಕೇವಲ ನೃತ್ಯದ ಬಗ್ಗೆ ಅಲ್ಲ. ಒಂದು ಸಣ್ಣ ಹಳ್ಳಿಯಿಂದ ಮತ್ತು ಸಾಮಾನ್ಯ ಕುಟುಂಬದಿಂದ ಬಂದ ವಿದುಷಿ ದೀಕ್ಷಾ, ದೊಡ್ಡ ಕನಸು ಕಂಡು ತಮ್ಮ ಗುರಿಯನ್ನು ಸಾಧಿಸಿದರು. ನಿರಂತರವಾಗಿ 12,960 ನಿಮಿಷಗಳ ಕಾಲ ದೀಕ್ಷಾ ನೃತ್ಯ ಮಾಡಿದರು. ನಾವು ಅವರ ಗುರಿಯನ್ನು ಕಡಿಮೆ ಮಾಡಲು ಸೂಚಿಸಿದಾಗಲೂ, ಅವರು ನಿರಾಕರಿಸಿದರು. ಈ ನಿರ್ಣಯವನ್ನು ನಾವು ನಿಜವಾದ ಸ್ಥಿರತೆ ಎಂದು ಕರೆಯುತ್ತೇವೆ. ಭರತನಾಟ್ಯವು ನಟರಾಜನ ನೃತ್ಯವಾಗಿದೆ, ಮತ್ತು ವಿಶ್ವದಲ್ಲಿ ಭರತನಾಟ್ಯದ ಅತ್ಯಂತ ದೀರ್ಘ ಪ್ರದರ್ಶನವನ್ನು ಈಗ ಉಡುಪಿಯ ವಿದುಷಿ ದೀಕ್ಷಾ ಅವರು ಪ್ರಯತ್ನಿಸಿದ್ದಾರೆ. ತಾಂತ್ರಿಕ ಪರಿಶೀಲನೆ ಪೂರ್ಣಗೊಂಡ ನಂತರ, ಅಧಿಕೃತ ಪ್ರಮಾಣಪತ್ರವನ್ನು ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ಡಾ. ಜಿ. ಶಂಕರ್ ಟ್ರಸ್ಟ್ ಮತ್ತು ರತ್ನಾಕರ್ ಸಂಜೀವ ಕಲಾಮಂಡಳಿ ಕೂಡ ಅವರನ್ನು ಸನ್ಮಾನಿಸಿದವು. ಔಪಚಾರಿಕ ಕಾರ್ಯಕ್ರಮದ ನಂತರ, ದಾಖಲೆ ಸೃಷ್ಟಿಸಿದ ವಿದುಷಿ ದೀಕ್ಷಾ ಅವರು ಮತ್ತೊಮ್ಮೆ ಭರತನಾಟ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪದ್ಮ ರಾಜ್, ಶಂಕರ್ ಪೂಜಾರಿ, ಶ್ರೀಧರ್ ಬನ್ನಂಜೆ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಶೋಜನ್ ಕೆ. ಜಿ, ರಾಹುಲ್, ಯುವ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ, ಉಷಾ ಹೆಬ್ಬಾರ್, ಗೀತಾಂಜಲಿ ಸುವರ್ಣ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ನ ಕಿಶೋರ್ ಕುಮಾರ್, ದೀಕ್ಷಾ ಅವರ ಕುಟುಂಬ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.


