ಬೆಳ್ತಂಗಡಿ: ಶಿವರಾತ್ರಿಯಂದು ಕುಡಿದ ಮತ್ತಿನಲ್ಲಿ ರಸ್ತೆಗೆ ಬಾಟಲಿ ಹೊಡೆದು ಹಾಕುತ್ತಿದ್ದವರನ್ನು ವಿಚಾರಿಸಲು ಸ್ಥಳಕ್ಕೆ ಹೋದ ಹೈವೆ ಪ್ಯಾಟ್ರೋಲ್ ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಣೂರು ಎಎಸ್ಐ ಗೆ, ತಂಡವೊಂದು ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿ ನಂತರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಕ್ಷಿಪ್ರ ಕಾರ್ಯಾಚರಣೆಯ ನಡೆಸಿ ಹಲ್ಲೆ ಮಾಡಿದ ಐದು ಜನರನ್ನು ಬಂಧಿಸಿ ವೇಣೂರು ಪೊಲೀಸರು ಜೈಲಿಗಟ್ಟಿದ್ದಾರೆ.
ಆರೋಪಿಗಳ ಬಂಧನ: ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಅಲೆಕ್ಕಿ ನಿವಾಸಿ ಅನಂದ್ ಸಪಲ್ಯ ಮಗ ಮೇಸ್ತ್ರಿ ಕೆಲಸ ಮಾಡುವ ಮಹೇಶ್ ಸಪಲ್ಯ (28), ಅಲೆಕ್ಕಿ ಅನಂದ್ ಸಪಲ್ಯ ಮಗ ಆಟೋ ಚಾಲಕ ಸುರೇಶ್(33), ಖಂಡಿಗ ನಿವಾಸಿ ಸುಂದರ ಮಗ ಆಟೋ ಚಾಲಕ ಅರುಣ್(29), ಅಂಗೇತ್ಯರು ನಿವಾಸಿ ಶಂಕು ಮಗ ಎಲೆಕ್ಟ್ರಿಕ್ ಕೆಲಸ ಮಾಡುವ ಗೌತಮ್(21) , ಖಂಡಿಗ ನಿವಾಸಿ ಮತ್ತೂರ ಮಗ ಮೇಸ್ತ್ರೀ ಕೆಲಸ ಮಾಡುವ ಸುರೇಶ್(28) ಸೇರಿ ಐದು ಜನರನ್ನು ವೇಣೂರು ಪೊಲೀಸರು ಮಾ.9 ರಂದು ಬೆಳಗ್ಗೆ ಬಂಧಿಸಿ ಸಂಜೆ ಐದು ಜನ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮಾ.11 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ನ್ಯಾಯಾಧೀಶರು ಆದೇಶ ಮಾಡಿದ್ದಾರೆ.ಉಳಿದ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ವೇಣೂರು ಪೊಲೀಸರು ಬಲೆ ಬಿಸಿದ್ದಾರೆ.
ವೇಣೂರು ಠಾಣೆಯ ಎಎಸ್ಐ ರಾಮಯ್ಯ ಹೆಗ್ಡೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿ ನಂತರ ಕೊಲೆಗೆ ಯತ್ನಿಸಿದ ಆರೋಪಿಗಳೆಲ್ಲರೂ ಕೂಡ ತೆಂಕಕಾರಂದೂರು ಗ್ರಾಮದ ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.ಇದರಲ್ಲಿ ಸುರೇಶ್ ಸಪಲ್ಯ ಎಂಬಾತ ತೆಂಕಕಾರಂದೂರು ಗ್ರಾಮದ ಬಿಜೆಪಿ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿಯಾಗಿದ್ದಾನೆ.
ಪ್ರಕರಣದ ವಿವರ: ವೇಣೂರು ಪೊಲೀಸ್ ಠಾಣೆಯ ಎ.ಎಸ್.ಐ ರಾಮಯ್ಯ ಹೆಗ್ಡೆ ಅವರು ಯುವಕರ ತಂಡ ಶಿವರಾತ್ರಿಯಂದು ಗುಂಡೇರಿ ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗುಂಡೇರಿ ಘಟನಾ ಸ್ಥಳಕ್ಕೆ ತನ್ನ ಇಲಾಖೆಯ ವಾಹನ ಚಾಲಕ ಶಾಂತ ಕುಮಾರ ಜೊತೆಯಲ್ಲಿ ಮಾ.9 ರಂದು ತಡರಾತ್ರಿ 1:30 ಕ್ಕೆ ಧಾವಿಸಿದ್ದಾರೆ. ತಡ ರಾತ್ರಿ ವೇಳೆ ರಸ್ತೆಯಲ್ಲಿದ್ದ ಯುವಕರನ್ನು ರಸ್ತೆಯಲ್ಲಿ ಸೋಡಾ ಬಾಟ್ಲಿಗಳನ್ನು ಒಡೆದು ಹಾಕಿರುವ ಬಗ್ಗೆ ರಾಮಯ್ಯ ಅವರು ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ತಂಡ ಅವರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ನಂತರ ದಾಳಿ ನಡೆಸಿ ಅವರನ್ನು ನೆಲಕ್ಕೆ ಹಾಕಿ ತುಳಿದು ಕೊಲೆಗೆ ಯತ್ನಿಸಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಎಎಸ್ಐ ರಾಮಯ್ಯ ಹೆಗ್ಡೆ ಅವರು ಮಾ.9 ರಂದು ಆಸ್ಪತ್ರೆಗೆ ದಾಖಲಾಗಿ ಬೆಳಗ್ಗೆ 6 ಗಂಟೆಗೆ ನೀಡಿರುವ ದೂರಿನಂತೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ
A-1 ಮಹೇಶ್, A-2 ಸುರೇಶ್, A-3 ಅರುಣ್ ಹಾಗೂ ಇತರ 4-5 ಅಪರಿಚಿತರ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ 143,147,332,353,307,504,506 ಜೊತೆಗೆ 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು.ಈ ಪ್ರಕರಣದ ಮುಂದಿನ ತನಿಖೆಯನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಡೆಸಲಿದ್ದಾರೆ.