ಬೆಳ್ತಂಗಡಿ: ಮಳೆಯ ನಡುವೆ ಘಾಟ್ ನಲ್ಲಿ ವಾಹನ ನಿಲ್ಲಿಸಿ ಅಪಾಯಕಾರಿ ಜಾಗಗಳಲ್ಲಿ ಜನರು ಓಡಾಡುತ್ತಿರುವುದು ಹೆಚ್ಚಾಗಿರುವ ಕಾರಣ ದಕ್ಷಿಣ ಕನ್ನಡ-ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸೇತುವಾಗಿರುವ ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಡಳಿತ ನಿಷೇಧಗೊಳಿಸಲಾಗಿದೆ.
ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ಈ ಕುರಿತು ಸೂಚನೆ ನೀಡುತ್ತಿದ್ದಾರೆ. ಮದ್ಯಪಾನ ಹಾಗೂ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನೂ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸೂಚನಾಫಲಕ ಹಾಕಲಾಗಿದೆ.
ಇವತ್ತಿನಿಂದ ಪೊಲೀಸರು ವಾಹನದಲ್ಲಿ ಗಸ್ತು ತಿರುಗಲಿದ್ದು, ಪ್ರವಾಸಿಗರು ಘಾಟಿಯಲ್ಲಿ ವಾಹನ ನಿಲ್ಲಿಸಿ ಮೋಜು ಮಸ್ತಿ ಮಾಡಿದ್ರೆ ಕೇಸ್ ದಾಖಲಾಗುತ್ತೆ.
ಇದೀಗ ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಮಳೆ ಸುರಿಯುವ ಸಮಯ, ಘಾಟ್ ನಲ್ಲಿ ಪ್ರಯಾಣಿಸುವವರು ವಾಹನ ನಿಲ್ಲಿಸಿ ಅಪಾಯಕಾರಿ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಕಳೆದ ವರ್ಷವೂ ಬಂಡೆಗಲ್ಲಿನ ಮೇಲೆ ಸೆಲ್ಫೀ ತೆಗೆದುಕೊಳ್ಳಲು ಹೋದ ಯುವಕನೊಬ್ಬ ಜಾರಿ ಬಿದ್ದಿದ್ದ. ಇಂಥ ಘಟನೆಗಳು ಜರುಗುವುದನ್ನು ತಡೆಯುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ.