ಚೆನ್ನೈ: ಕುಖ್ಯಾತ ದಂತಚೋರ, ಚಂದನ ಕಳ್ಳಸಾಗಣೆದಾರ ವೀರಪ್ಪನ್ ಅವರ ಪುತ್ರಿ ವಿದ್ಯಾರಾಣಿಯವರನ್ನು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ.
ವಿದ್ಯಾರಾಣಿ 2020ರ ಫೆಬ್ರವರಿಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರು. ಅಂದಿನಿಂದಲೂ ಪಕ್ಷದ ಯುವಘಟಕದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಆಕೆಗೆ ಈಗಯುವ ಮೋರ್ಚಾದ ಉಪಾಧ್ಯಕ್ಷೆ ಹುದ್ದೆ ದೊರೆತಿದೆ.
ಮುಂದಿನ ವರ್ಷದ ಚುನಾವಣೆಗೆ ಮುನ್ನ ಪಕ್ಷದ ಸದಸ್ಯ ಬಲ ಹೆಚ್ಚಿಸಲು ಮುಂದಾಗಿರುವ ರಾಜ್ಯಾಧ್ಯಕ್ಷ ಎಲ್ ಮುರುಗನ್, 2017 ರಲ್ಲಿ ಬಿಜೆಪಿಗೆ ಸೇರಿದ ಎಐಎಡಿಎಂಕೆ ಸಂಸ್ಥಾಪಕ ರಾಮಚಂದ್ರನ್ (ಎಂಜಿಆರ್)ದತ್ತು ಪುತ್ರಿ ಗೀತಾ ಮತ್ತು ಎಂಸಿ ಚಕ್ರಪಾಣಿ(ರಾಮಚಂದ್ರನ್ ಅವರ ಸಹೋದರ) ಅವರ ಮೊಮ್ಮಗ ಆರ್.ಪ್ರವೀಣ್ ಮತ್ತು ನಟಿ ರಾಧಾ ರವಿ ಅವರನ್ನು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಗೀತ ನಿರ್ದೇಶಕ ದೀನಾ, ನಿರ್ದೇಶಕ ಪೆರಾರಸು ಅವರು ಕಲೆ ಮತ್ತು ಸಂಸ್ಕೃತಿ ವಿಭಾಗದ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ನಟ ಆರ್ ಕೆ ಸುರೇಶ್ ಅವರಿಗೆ ಒಬಿಸಿ ಸೆಲ್ ನ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಒಟ್ಟಾರೆ, 38ಕ್ಕೂ ಅಧಿಕ ಕಚೇರಿ ನಿರ್ವಾಹಕರನ್ನು ನೇಮಿಸಿರುವ ಮುರಗನ್, ಯುವ ಮೋರ್ಚಾ, ಮಹಿಳಾ ಮೋರ್ಚಾ, ಮೀನುಗಾರರು, ನೇಕಾರರು ಹಾಗೂ ಅಲ್ಪಸಂಖ್ಯಾತ ಘಟಕಗಳಿಗೂ ಪದಾಧಿಕಾರಿಗಳನ್ನು ನೇಮಿಸಿದ್ದಾರೆ.