ಆಂಧ್ರಪ್ರದೇಶ: ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಾಸ್ಸು ಬರುತ್ತಿದ್ದ ವಾಹನ ಬ್ರೇಕ್ ಫೇಲ್ ಆದ ಕಾರಣ ಬೆಟ್ಟದಿಂದ ಕೆಳಗಡೆ ಉರುಳಿ, 7 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ತಂತಿಕೊಂಡ ಜಿಲ್ಲೆಯಲ್ಲಿ ನಡೆದಿದೆ.
ಇಂದು ನಸುಕಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಂತಿಕೊಂಡಾ ಘಾಟ್ ರಸ್ತೆಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ದುರ್ಘಟನೆ ಸಂಭವಿಸಿದೆ.
ಗುರುವಾರ ರಾತ್ರಿ ಮದುವೆ ಮುಗಿಸಿಕೊಂಡು ಶುಕ್ರವಾರ ಬೆಳಗ್ಗೆ ಊರಿನ ಕಡೆಗೆ ಗಂಡಿನ ಕಡೆಯವರು ವ್ಯಾನ್ನಲ್ಲಿ ಹೊರಟ್ಟಿದ್ದರು. ಮದುವೆ ಮಂಟಪದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವ್ಯಾನ್ ಬೆಟ್ಟದಿಂದ ಕೆಳಕ್ಕೆ ಉರುಳಿದೆ. ಏಳು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಗೋಕವರಂ ಮಂಡಲದ ಠಾಕೂರ್ಪಾಲೆಂ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ರಜಮುಂಡ್ರಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಬಾಜ್ಪೇಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಶವಪರೀಕ್ಷೆಗೆಂದು ರಾಜಮುಂಡ್ರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.