ಚಮೋಲಿ: ಉತ್ತರಾಖಂಡ್ ಚಮೋಲಿ ಜಿಲ್ಲೆಯ ಜೋಶಿಮಠದ ನಂದಾದೇವಿ ಬಳಿ ಸಂಭವಿಸಿದ ಹಿಮಪಾತದಲ್ಲಿ 150 ಮಂದಿ ನಾಪತ್ತೆಯಾಗಿದ್ದು, 10 ಮಂದಿಯ ಶವ ಪತ್ತೆ ಹಚ್ಚಲಾಗಿದೆ.
ಚಿಮೋಲಿ ಜಿಲ್ಲೆಯಲ್ಲಿ ದಿಢೀರನೆ ಸಂಭವಿಸಿದ ಹಿಮಪಾತದಿಂದ ವಿದ್ಯುತ್ ಘಟಕ ಹಾಗೂ ನಿರ್ಮಾಣ ಹಂತದಲ್ಲಿದ್ದ ಕೇಂದ್ರ ಸರಕಾರದ ಕಾಮಗಾರಿಗಳು ಹಾಗೂ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ವಿವಿಧ ಸೇನಾಪಡೆಗಳಿಂದ ಸಮಾರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಂಗಾನದಿ ಹಾಗೂ ಅಲ್ಕಾನಂದ ಒಂದು ಮೀಟರ್ ನಷ್ಟು ಎತ್ತರದಲ್ಲಿ ಹರಿಯುತ್ತಿದ್ದು, ಇದುವರೆಗೆ 10 ಮಂದಿಯ ಶವಪತ್ತೆ ಹಚ್ಚಲಾಗಿದೆ.
ಮೃತರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟು ಆರು ಲಕ್ಷ ರೂಪಾಯಿ ಪರಿಹಾರ ಘೋಷಿಸಿವೆ. ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ. ಅದರ ಜತೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.