Thursday, June 4, 2026
Homeತಾಜಾ ಸುದ್ದಿಉಪ್ಪಿನಂಗಡಿ: ಪೆರ್ನೆ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ, ಮೂವರು ಆರೋಪಿಗಳ ಬಂಧನ

ಉಪ್ಪಿನಂಗಡಿ: ಪೆರ್ನೆ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ, ಮೂವರು ಆರೋಪಿಗಳ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಪೆರ್ನೆಯ ಅಡಿಕೆ ವ್ಯಾಪಾರಿಯ ಕೊಲೆ ಯತ್ನ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಇಂದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಅ.27ರಂದು ಉಪ್ಪಿನಂಗಡಿಯ ಅಡಿಕೆ ವ್ಯಾಪಾರಿ ದೀಪಕ್ ಜಿ ಶೆಟ್ಟಿ ಸಂಜೆ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ಯುವಕರ ತಂಡವೊಂದು ಅವರ ಬೈಕ್ ನ್ನು ಅಡ್ಡ ಕಟ್ಟಿ ಮಾರಕಾಯುಧಗಳಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಬೈಕ್ ನ ಬ್ಯಾಗ್ ನಲ್ಲಿದ್ದ 3.50 ಲಕ್ಷ ರೂ ಹಣದೊಂದಿಗೆ ಪರಾರಿಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ದಿನಗಳ ನಂತರ ಉಪ್ಪಿನಂಗಡಿ ಠಾಣಾ ಎಸೈ ಈರಯ್ಯ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಜಿಪ ಮಿತ್ತಮಜಲು ನಿವಾಸಿ ಅಫ್ರಿದ್(22), ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಹನಕೊಡು ಕಾಗಡಿ ಕಟ್ಟೆ ನಿವಾಸಿ ಜುರೈಜ್ (20) ಹಾಗೂ ಕಡೇಶಿವಾಲಯ ಗ್ರಾಮದ ನಿವಾಸಿ ಮಹಮ್ಮದ್ ತಂಝಿಲ್(22) ಬಂಧಿತ ಆರೋಪಿಗಳು. ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಸೆರೆಹಿಡಿಯಲು ಬಲೆ ಬೀಸಿದ್ದಾರೆ.

ಆರೋಪಿಗಳಾದ ಅಫ್ರಿದ್ ಮತ್ತು ಜುರೈಜ್ ನನ್ನು ಗುಂಡ್ಯ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮಹಮ್ಮದ್ ತಂಝಿಲ್ ನಲ್ಲಿ ಕಡೆಶಿವಾಲಯದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹೋಂಡಾ ಆಕ್ಟಿವಾ, ಆರೋಪಿಗಳು ಬಳಸುತ್ತಿದ್ದ ಮೊಬೈಲ್ ಫೋನ್ ಮತ್ತು ದರೋಡೆ ಮಾಡಿದ ನಗದನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಎಸೈ ಈರಯ್ಯ, ಎ.ಎಸ್.ಐ ಗಳಾದ ಚೋಮ, ಜನಾರ್ಧನ, ಸಿಬ್ಬಂದಿಗಳಾದ ಹರಿಶ್ಚಂದ್ರ, ಶೇಖರ, ಬಾಲಕೃಷ್ಣ, ಹರೀಶ, ಹಿತೋಷ, ಕುಶಾಲಪ್ಪ, ಇರ್ಷಾದ್ ಪಡಂಗಡಿ, ಪ್ರತಾಪ್, ಚಂದ್ರಶೇಖರ, ವಿನಾಯಕ, ರಂಜಿತ್, ಪುತ್ತೂರು ಸರ್ಕಲ್ ಸ್ಟೇಷನ್ ನ ಧರ್ಣಪ್ಪ, ಅಬ್ದುಲ್ ಸಲೀಂ, ಶಿವರಾಮ, ಪಿಸಿ ಜಗದೀಶ ಅತ್ತಾಜೆ, ಬಂಟ್ವಾಳ ಸಂಚಾರ ಠಾಣಾ ಹೆಚ್ ಸಿ ದೇವದಾಸ್ ಮತ್ತು ಇಲಾಖೆಯ ವಾಹನ ಚಾಲಕರಾದ ಬಂದೆ ನವಾಜ್ ಬುಡ್ಕಿ, ಕನಕರಾಜ್ ಇದ್ದರು.

- Advertisement -

Latest News

error: Content is protected !!