ಉಪ್ಪಿನಂಗಡಿ: ಗ್ರಾಮದ ಪೆರಿಯಡ್ಕದ ಬೊಳ್ಳಾವು ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿರುವ ಜಾಗ ಮತ್ತು ಬೊಳ್ಳಾವು ವಿಠಲ ಶೆಟ್ಟಿ ಇವರ ಜಾಗದ ಮದ್ಯೆ ವಿದ್ಯುತ್ ಲೈನ್ ಹಾದು ಹೋಗಿದೆ. ಆದರೆ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬದ ಸ್ಟೇ ವೈರನ್ನು ಆಧಾರಕ್ಕಾಗಿ ಅಡಿಕೆ ಮರಕ್ಕೆ ಕಟ್ಟಿರುವುದು, ಸಿಬ್ಬಂದಿಗಳ ಬೇಜವಾಬ್ದಾರಿಗೆ ಕನ್ನಡಿ ಹಿಡಿದಂತಿದೆ.

ಈ ಬಗ್ಗೆ ಮೆಸ್ಕಾಂ ಉಪ್ಪಿನಂಗಡಿ ಶಾಖೆಗೆ ಏಪ್ರಿಲ್ ತಿಂಗಳ 17 ತಾರೀಖಿನಂದು ದೂರನ್ನು ದಾಖಲಿಸಲಾಗಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕವಾದ ಟೀಕೆಗಳು ಬಂದ ನಂತರ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆ ನಿನ್ನೆ ಬೆಳಿಗ್ಗೆ ಗುತ್ತಿಗೆದಾರರ ಮುಖಾಂತರ ಕಾಟಾಚಾರದ ಕೆಲಸ ಮಾಡಿಸಿ ಹೋಗಿದೆ.

ಟನ್ ಗಟ್ಟಲೆ ತೂಕವಿರುವ ವಿದ್ಯುತ್ ಕಂಬವನ್ನು ಆಧಾರಕ್ಕಾಗಿ ಅಡಿಕೆ ಮರಕ್ಕೆ ಕಟ್ಟಿರುವುದು ಈಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಈಗಾಗಲೇ ಮಳೆಗಾಲದೊಂದಿಗೆ ದೇಶದಲ್ಲಿ ಅಂಫಾನ್ ಚಂಡಮಾರುತವು ತನ್ನ ರುದ್ರನರ್ತನವನ್ನು ತೋರಿಸುತ್ತಿದೆ. ಹಾಗಾಗಿ ಈ ಕಳಪೆ ಕಾಮಗಾರಿಯಿಂದ ಸ್ಥಳೀಯರ ಜೀವಕ್ಕೆ ಕುತ್ತು ಬರುವ ಮೊದಲೇ, ಮೆಸ್ಕಾಂ ಇಲಾಖೆ ಜಾಗೃತರಾಗಿ ಭಾರ ಹೆಚ್ಚಾಗಿ ಬೆಂಡ್ ಆಗಿರುವ ಕಂಬವನ್ನು ತೆಗೆದು ಮತ್ತು ಕಂಬಕ್ಕೆ ತಾಗಿಕೊಂಡಿರುವ ಮರಗಳ ತೆರವು ಗೊಳಿಸಿ ಶಾಶ್ವತವಾದ ಪರಿಹಾರವನ್ನು ಒದಗಿಸಬೇಕೆಂಬುವುದು ಸ್ಥಳೀಯರ ಒಕ್ಕೊರೊಲ ಆಗ್ರಹವಾಗಿದೆ.


