ಉಪ್ಪಿನಂಗಡಿ: ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಲೋಹಿತ್ ಕುಮಾರ್ (47) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಲೋಹಿತ್ ಕುಮಾರ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಇಅವರು ಮದ್ಯಪಾನದ ಚಟ ಹೊಂದಿದ್ದರು ಎನ್ನಲಾಗಿದೆ . ಹೀಗಾಗಿ ದಂಪತಿ ನಡುವೆ ಮನಸ್ತಾಪಗೊಂಡು ಪತ್ನಿ ತನ್ನ ಮಕ್ಕಳೊಂದಿಗೆ ಕೆಲ ದಿನಗಳ ಹಿಂದೆ ತನ್ನ ತಾಯಿ ಮನೆಗೆ ಹೋಗಿದ್ದರು. ಸೆ.18ರಂದು ಸಂಜೆ ಗುಂಡ್ಯಕ್ಕೆ ಹೋಗಿ ಮನೆಗೆ ಬಂದಿದ್ದರು. ಬಳಿಕ ಮೊಬೈಲ್ ವಾಟ್ಸಾಪ್ ಸ್ಟೇಟಸ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಂದೇಶ ಹಾಕಿದ್ದು ಮಂಗಳೂರಿನಲ್ಲಿರುವ ಇವರ ಅಣ್ಣನ ಮಗಳು ಬೆಳಿಗ್ಗೆ ನೋಡಿ ಮಾಹಿತಿ ನೀಡಿದ್ದರು.
ಬೆಳಿಗ್ಗೆ ಲೋಹಿತ್ ವಾಸವಾಗಿದ್ದ ಮನೆಗೆ ಹೋಗಿ ನೋಡಿದಾಗ ಮನೆಯ ಹಾಲ್ ನಲ್ಲಿ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ನೇಣು ಬಿಗಿದು ನೇತಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು ಪರಿಶೀಲಿಸಿದಾಗ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದ ಪರಿಣಾಮ ಮಾನಸಿಕ ಸ್ಥಿಮಿತ ಕಳೆದುಕೊಂಡು ಸಂಸಾರದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ತಂದೆ ಸ್ವರ್ಣಪ್ಪನ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.