ಉಪ್ಪಿನಂಗಡಿ; ಕೌಟುಂಬಿಕ ವಿಚಾರಕ್ಕೆ ಕತ್ತಿಯಿಂದ ಹಲ್ಲೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಸುಳ್ಯ ಐವರ್ನಾಡು ನಿವಾಸಿ ಅಶೋಕ ಎಂಬವರು ದೂರು ನೀಡಿದ್ದಾರೆ.
ದೂರುದಾರ ಅಶೋಕ ಕೆ ಎಂಬವರು ದಿನಾಂಕ 12.05.2026 ರಂದು ರಾತ್ರಿ, ತನ್ನ ಹೆಂಡತಿಯ ಮನೆಯಾದ ಪುತ್ತೂರು ಬಜತ್ತೂರು ಗ್ರಾಮದ ಕಿಂಡೋವು ಎಂಬಲ್ಲಿ, ಪೊನ್ನಕ್ಕ, ಜಾನಕಿ ಹಾಗೂ ತನ್ನ ಮಾವ ಚೆನ್ನಪ್ಪ ಗೌಡರವರೊಂದಿಗೆ ಮಾತನಾಡುತ್ತಿದ್ದಾಗ, ತನ್ನ ಹೆಂಡತಿಯ ತಂಗಿಯ ಗಂಡನಾದ ಆರೋಪಿ ರಾಜೇಶ ಎಂಬಾತನು ಅಮಲು ಪದಾರ್ಥ ಸೇವಿಸಿ ಕತ್ತಿಯೊಂದನ್ನು ಹಿಡಿದುಕೊಂಡು ಬಂದು ಕೌಟುಂಬಿಕ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ಬೈದು, ಸ್ಥಳದಲ್ಲಿದ್ದ ಪೊನ್ನಕ್ಕ, ಜಾನಕಿ ಹಾಗೂ ಅಶೋಕ್ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಜೀವಬೆದರಿಕೆ ಒಡ್ಡಿ ತೆರಳಿದ್ದಾನೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜೇಶರವರು ತನ್ನ ಮೇಲೆ ತನ್ನ ಹೆಂಡತಿಯ ಸಹೋದರಿಯ ಗಂಡ ಅಶೋಕ ಹಾಗೂ ತನ್ನ ಮಾವ ಚೆನ್ನಪ್ಪ ಗೌಡರವರು ಕತ್ತಿಯಿಂದ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ್ದಾರೆ ಎಂದು ನೀಡಿದ ಪ್ರತಿದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.


