ಬೆಂಗಳೂರು: ಕೇಂದ್ರ ಗೃಹ ಇಲಾಖೆ ಈ ವರ್ಷದ ‘ಉತ್ತಮ ತನಿಖಾ ಪ್ರಶಸ್ತಿ -2020’ ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೇಶದ 121 ಪೊಲೀಸ್ ಅಧಿಕಾರಿಗಳು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಉದ್ದೇಶ ಮತ್ತು ತನಿಖಾ ಅಧಿಕಾರಿಗಳಿಂದ ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ಆಯ್ಕೆಯಾದ 121 ಪೊಲೀಸ್ ಅಧಿಕಾರಿಗಳಲ್ಲಿ ರಾಜ್ಯದ 4 ಅಧಿಕಾರಿಗಳು ಈ ವರ್ಷದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಪ್ರಶಸ್ತಿ ಪಡೆದ ಪೊಲೀಸ್ ಅಧಿಕಾರಿಗಳು ಇವರು.
ಬೆಂಗಳೂರಿನ ಮೈಕೋ ಲೇಔಟ್ ಎಸಿಪಿ ಸುದೀರ್ ಎಂ ಹೆಗಡೆ, ರೈಲ್ವೆ ಉಪವಿಭಾಗದ ಡಿವೈಎಸ್ಪಿ ಡಿ.ಅಶೋಕ್, ಬೆಂಗಳೂರು ಸಿಸಿಬಿಯ ಪೊಲೀಸ್ ಇನ್ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು, ಅಶೋಕ್ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಧಿರ ಹೆಚ್.ಎಸ್ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದ ಸುಧೀರ್ .ಎಂ.ಹೆಗ್ಡೆ
ಇಂದು ಕೇಂದ್ರ ಸರ್ಕಾರ ಉತ್ತಮ ತನಿಖಾ ಪ್ರಶಸ್ತಿಗಾಗಿ ಗುರುತಿಸಿರುವ ಸುಧೀರ್ .ಎಂ.ಹೆಗ್ಡೆ, ಕಳೆದ ವರ್ಷ ರಾಷ್ಟ್ರಪತಿ ಪದಕಕ್ಕೆ ಕೂಡ ಭಾಜನರಾಗಿದ್ದರು. ಇವರು ಪ್ರಸ್ತುತ ಬೆಂಗಳೂರು ಮೈಕೋಲೇಔಟ್ ನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಮಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 40 ಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನು ಭೇದಿಸಿ ಹಲವು ಭ್ರಷ್ಟ ಅಧಿಕಾರಿಗಳನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿದ್ದರು.