ಬೆಳ್ತಂಗಡಿ : ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿ ತಿಥಿ ದಿನ ಪ್ರತ್ಯಕ್ಷವಾದ ವಿಚಿತ್ರ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಶ್ರೀನಿವಾಸ್ ದೇವಾಡಿಗ (50 ) ಕಳೆದ ತಿಂಗಳು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಮಂದಿ ಹುಡುಕಾಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಇನ್ನು ಫೆಬ್ರವರಿ 6 ರಂದು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗುಡ್ಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನೇಣುಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ್ದರ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಶ್ರೀನಿವಾಸ್ ದೇವಾಡಿಗ ಅವರ ಮನೆಮಂದಿಗೆ ವಿಚಾರ ತಿಳಿಸಿ ಗುರುತು ಪತ್ತೆಹಚ್ಚಲು ಕರೆಸಿದ್ದರು. ಮನೆ ಮಂದಿ ಇದು ಶ್ರೀನಿವಾಸ್ ದೇವಾಡಿಗ ಅವರ ಶವ ಎಂದು ಗುರುತು ಪತ್ತೆ ಹಚ್ಚಿದ್ದರು. ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ರೀತಿಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ಮನೆವರಿಗೆ ಬಿಟ್ಟು ಕೊಟ್ಟಿದ್ದರು. ನಂತರ ಮನೆಗೆ ಆಂಬುಲೆನ್ಸ್ ಮೂಲಕ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದ್ದರು.ಮತ್ತೊಂದೆಡೆ ಪೊಲೀಸರಿಂದ ಮನೆ ಮಂದಿ ಸತ್ತ ಧೃಡಿಕರಣ ವರದಿ ಪಡೆದು ಬೆಳ್ತಂಗಡಿ ತಾಲೂಕು ಕಛೇರಿಯಿಂದ ಸತ್ತ ವ್ಯಕ್ತಿಯ ಮರಣ ಸರ್ಟಿಫೀಕೆಟ್ ಪಡೆದಿದ್ದಾರೆ
ಅದರಂತೆ ನಿನ್ನೆ ಆ ವ್ಯಕ್ತಿಯ ತಿಥಿ ಕಾರ್ಯಕ್ರಮವನ್ನು ಕುಟುಂಬ ಸದಸ್ಯರು ಸೇರಿ ಗರ್ಡಾಡಿ ಮನೆಯಲ್ಲಿ ಮಾಡುತ್ತಿದ್ದಾಗ ವ್ಯಕ್ತಿ ಜೀವಂತವಾಗಿ ಪ್ರತ್ಯಕ್ಷನಾಗಿದ್ದಾನೆ. ವ್ಯಕ್ತಿಯನ್ನು ನೋಡಿ ಮನೆಯವರು ಒಂದು ಕಡೆ ಶಾಕ್ ಆದ್ರೆ ಮತ್ತೊಂದು ಕಡೆ ಗಾಬರಿಗೊಂಡಿದ್ದರು.
ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನೆಯವರು ಶ್ರೀನಿವಾಸ್ ಅವರನ್ನು ಕರೆದುಕೊಂಡು ಹೋಗಿ ಜೀವಂತ ಇರುವ ಬಗ್ಗೆ ತೋರಿಸಿ ಹೇಳಿಕೆ ಕೊಡಿಸಿ ಕಾನೂನು ಪ್ರಕ್ರಿಯೆ ಮಾಡಿಸಿ ಮನೆಗೆ ಬಂದಿದ್ದಾರೆ.