ಉಡುಪಿ: ಗಾರೆ ಕೆಲಸ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಕುಂದಾಪುರದ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಶಿವರಾಜ್ (35) ಮೃತರು.
ಶಿವರಾಜ್ ಕಳೆದ 15 ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದರು.ಕುಂದಾಪುರ ಹೊರವಲಯದ ಕಡ್ಗಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವರ ನಿರ್ಮಾಣ ಹಂತದಲ್ಲಿರುವ ಮನೆಯ ಗಾರೆ ಕೆಲಸಕ್ಕೆ ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಎತ್ತಿ ಬೇರೆ ಕಡೆಗೆ ಹೊತ್ತೊಯ್ಯು ವಾಗ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಅಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ಶಿವರಾಜ್ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿ ತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೃತ ಶಿವರಾಜ್ ಅವಿವಾಹಿತರಾಗಿದ್ದರು.
ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


