ಉಡುಪಿ; ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನಜೆಡ್ಡು ಕಮಲಾಕ್ಷ ಪ್ರಭು(58) ಅಲ್ಪಕಾಲ ಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೋಮವಾರ ಅವರು ನಿಧನರಾಗಿದ್ದಾರೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೇ ಯಕ್ಷಗಾನ ಕ್ಷೇತ್ರದಲ್ಲೂ ಕಲಾ ಸೇವೆ ಮಾಡುತ್ತಿದ್ದರು. ಬಡಗುತಿಟ್ಟಿನ ಯಕ್ಷಗಾನ ಕಲೆಯ ಉಳಿವು-ಬೆಳವಿಗೆ ಕಾರಣರಾಗಿದ್ದರು. 90 ದಶಕದಲ್ಲಿ ಮಣಿಪಾಲದ ಸರಳೇಬೆಟ್ಟುವಿನಲ್ಲಿ ಬಾಲಮಿತ್ರ ಯಕ್ಷ-ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಿ ಎಳೆಯ ಪ್ರತಿಭೆಗಳಿಗೆ ನಿರಂತರ ಉಚಿತ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದರು.
ಬಾಲಮಿತ್ರ ಯಕ್ಷಗಾನ ಮಂಡಳಿಯು ದೇಶದಲ್ಲಿ ಮಾತ್ರವಲ್ಲದೆ ದುಬೈ, ಸಿಂಗಾಪುರ, ಆಫ್ರಿಕಾ ಸೇರಿ ವಿಶ್ವದ ವಿವಿಧೆಡೆ ಪ್ರದರ್ಶನ ನೀಡಿದೆ. ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಮನೆ ಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುವ ಹೂವಿನ ಕೋಲು ಪ್ರಾಕಾರವನ್ನು ನಗರ ಪ್ರದೇಶಕ್ಕೂ ತಲಪಿಸುವ ಕಾರ್ಯ ಮಾಡಿದ್ದರು. ಮೃತರು ಪತ್ನಿ ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ಶುಶ್ರೂಷಾಧೀಕ್ಷಕಿ ಕವಿತಾ ಕಾಮತ್, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.