ಉಡುಪಿ: ನಗರದ ಸಿಟಿ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೋಲೀಸರು ಬಯಲು ಮಾಡಿದ್ದಾರೆ. ಪ್ರಕರಣದಲ್ಲಿ ಶೇಖರ್ ಶೆಟ್ಟಿ, ಜಾನ್ಸನ್ ಅಲ್ಮೇಡಾ ಮತ್ತು ಹರ್ಷಿತ್ ಶೆಟ್ಟಿ ಎಂಬುವವರನ್ನು ಬಂಧಿಸಲಾಗಿದೆ. ಮೂವರೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪವಿದ್ದು ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 4 ಮೊಬೈಲ್ ಫೋನ್, 6,730 ರೂ. ವಶ ಪಡಿಸಿಕೊಂಡಿದ್ದಾರೆ. ಇಂದು ದಾಳಿ ನಡೆಸಿದ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ , ಕೆಲ ವರ್ಷಗಳ ಹಿಂದೆ ಹತ್ಯೆಯಾದ ಉದ್ಯಮಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಒಡೆತನದ್ದು ಎಂದು ತಿಳಿದುಬಂದಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜೇಶ್ವರಿ ಶೆಟ್ಟಿ ಮೇಲೆಯೂ ಪ್ರಕರಣವನ್ನು ದಾಖಲು ಮಾಡಲಾಗಿದೆ. ರಾಜೇಶ್ವರಿ ಶೆಟ್ಟಿ ಸೇರಿದಂತೆ ಮೂವರ ಬಂಧನ ಬಾಕಿ ಇದೆ. ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಜ್ಯೋತಿಷಿ ನಿರಂಜನ್ ಭಟ್ ಜೊತೆ ಸೇರಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಹತ್ಯೆ ಮಾಡಿದ್ದರು. ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಅವರು ಮೊದಲ ಆರೋಪಿ. ಪುತ್ರ ನವನೀತ್ ಶೆಟ್ಟಿ 2ನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಜ್ಯೋತಿಷಿ ನಿರಂಜನ್ ಅವರು 3ನೇ ಆರೋಪಿಯಾಗಿದ್ದಾರೆ.
2016ರ ಜುಲೈ 28ರಂದು ಉಡುಪಿಯ ನಿವಾಸದಲ್ಲಿ ಭಾಸ್ಕರ ಶೆಟ್ಟಿ ಅವರನ್ನು ಹತ್ಯೆ ಮಾಡಿ, ಶವವನ್ನು ಕಾರಿನಲ್ಲಿ ಸಾಗಿಸಿ, ನಿರಂಜನ್ ಸಹಾಯದಿಂದ ಹೋಮಕುಂಡದಲ್ಲಿ ಶವವನ್ನು ಸುಟ್ಟು ಮೂಳೆಗಳನ್ನು ನದಿಗೆ ಎಸೆಯಲಾಗಿತ್ತು. ನಿರಂಜನ್ ಭಟ್ ಜೊತೆ ರಾಜೇಶ್ವರಿ ಶೆಟ್ಟಿ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಆರೋಪವಾಗಿದೆ. ಈ ಹತ್ಯೆ ಪ್ರಕರಣದಲ್ಲಿ ರಾಜೇಶ್ವರಿ ಶೆಟ್ಟಿ ಬಂಧನವಾಗಿತ್ತು. ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದಾರೆ.