ಉಡುಪಿ: ಮಧ್ಯರಾತ್ರಿ ಪಟಾಕಿ ಮತ್ತು ಪುಸ್ತಕ ಮಳಿಗೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕುಂದಾಪುರ ವೆಂಕಟರಮಣ ದೇವಸ್ಥಾನದ ಸಮೀಪ ನಡೆದಿದೆ. ಇಲ್ಲಿನ ಪಟಾಕಿ ಅಂಗಡಿಗೆ ಭೀಕರ ಬೆಂಕಿ ಹೊತ್ತಿಕೊಂಡು, ಅಂಗಡಿಯೊಂದಿಗೆ ಇಡೀ ಕಟ್ಟಡಕ್ಕೆ ಆವರಿಸಿದೆ. ಭಾನುವಾರ ತಡರಾತ್ರಿ ಸುಮಾರು 3 ಗಂಟೆ ವೇಳೆಗೆ ಜಗದೀಶ್ ಭಟ್ ಎಂಬವರ ಪುಸ್ತಕದ ಮಳಿಗೆ ಮತ್ತು ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟಕ ವಸ್ತುಗಳಿದ್ದ ಕಾರಣ ಅಗ್ನಿಯ ಕೆನ್ನಾಲಿಗೆ ಎಲ್ಲೆಡೆ ಪಸರಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿತು. ಪಕ್ಕದ ಮತ್ತೆರಡು ಅಂಗಡಿಗಳಿಗೂ ಘಟನೆಯಿಂದ ಹಾನಿ ಸಂಭವಿಸಿದೆ.ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲು ಹಲವು ಗಂಟೆಗಳೇ ಬೇಕಾಗಿತ್ತು ಎನ್ನಲಾಗಿದೆ. ನಿರಂತರ ಸ್ಫೋಟಗಳ ಶಬ್ದದಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ


