ಉಡುಪಿ; ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಯುವತಿಯನ್ನು ರಕ್ಷಿಸಿದ ಆರ್ ಪಿಎಫ್ ಸಿಬ್ಬಂದಿ ಅಪರ್ಣಾಗೆ ಕಾರವಾರದ ಆರ್ಆರ್ಎಂ ಆಕೆಗೆ 5000ರೂ. ನಗದು ಬಹುಮಾನವನ್ನು ಘೋಷಿಸಿದ್ದರು. ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ 5000ರೂ.ಗಳ ಚೆಕ್ನ್ನು ಅಪರ್ಣಾ ಅವರಿಗೆ ಉಡುಪಿ ನಿಲ್ದಾಣದಲ್ಲಿ ಹಸ್ತಾಂತರಿಸಿದರು.
ಘಟನೆಯ ವಿವರ
ಮಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಆಗಮಿಸಿದ ಮಂಗಳೂರು ಸೆಂಟ್ರಲ್- ಮಡಗಾಂವ್ ಪ್ಯಾಸೆಂಜರ್ ರೈಲು ಉಡುಪಿ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನಿಂತು ಚಲಿಸಲಾರಂಭಿಸಿದ ವೇಳೆ ತಿಂಡಿ ತರಲು ಇಳಿದಿದ್ದ ಯುವತಿ ಅವಸರವಸರವಾಗಿ ಓಡಿ ಬಂದು ಪ್ಲಾಟ್ಫಾರ್ಮ್ ನಂ.1ರಲ್ಲಿ ರೈಲು ಬೋಗಿ ಹತ್ತುವ ವೇಳೆ ಆಯತಪ್ಪಿ ಬಿದ್ದಿದ್ದಾಳೆ.
ಅಲ್ಲೇ ಪಕ್ಕದಲ್ಲಿ ನಿಂತು ಅಲ್ಲಿದ್ದ ಪ್ರಯಾಣಿಕರನ್ನು ದೂರ ಸರಿಸುತಿದ್ದ ಆರ್ಪಿಎಫ್ ಮಹಿಳಾ ಸಿಬ್ಬಂದಿ ಅಪರ್ಣಾ ತಕ್ಷಣ ಯುವತಿ ಬಿದ್ದಿದ್ದನ್ನು ಗಮನಿಸಿ ಆಕೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ.. ಅದಾಗಲೇ ಯುವತಿಯ ಕಾಲುಗಳು ಪ್ಲಾಟ್ಫಾರಂ ಹಾಗೂ ಚಲಿಸುವ ರೈಲಿನ ಮಧ್ಯೆ ಸಿಲುಕಿತ್ತು. ಒಂದಿಬ್ಬರು ಪ್ರಯಾಣಿಕರ ನೆರವಿನಿಂದ ಅಪರ್ಣಾ ಅವರು ಯುವತಿಯನ್ನು ಮೇಲಕ್ಕೆಳೆದುಕೊಂಡು ಆಕೆಯನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಘಟನೆ ತಿಳಿದಾಕ್ಷಣ ರೈಲ್ವೆ ಗಾರ್ಡ್ ವಾಕಿಟಾಕಿ ಮೂಲಕ ರೈಲನ್ನು ನಿಲ್ಲಿಸಲು ಸೂಚಿಸಿದ್ದು, ಲೋಕೊ ಪೈಲೆಟ್ ರೈಲನ್ನು ನಿಲ್ಲಿಸಿದ್ದಾರೆ. ನಿಲ್ದಾಣದಲ್ಲಿದ್ದ ಆರ್ಪಿಎಫ್ ಇನ್ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಮಹಿಳಾ ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದರು. ಆಕೆಗೆ ಯಾವುದೇ ಗಾಯಗಳಾಗಿರಲಿಲ್ಲ. ಮಹಿಳಾ ಕಾನ್ಸ್ಟೇಬಲ್ ಆಕೆಯನ್ನು ಸುರಕ್ಷಿತವಾಗಿ ರೈಲು ಹತ್ತಿಸಿದ್ದಾರೆ. ಮುಂದೆ ಕುಂದಾಪುರ ಹಾಗೂ ಭಟ್ಕಳ ನಿಲ್ದಾಣಗಳಲ್ಲೂ ಆಕೆಯ ಆರೋಗ್ಯವನ್ನು ಸಿಬ್ಬಂದಿ ವಿಚಾರಿಸಿದ್ದರು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.ಆರ್ಪಿಎಫ್ ಸಿಬ್ಬಂದಿ ಅಪರ್ಣಾ ಅವರ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


