ಉಡುಪಿ: ಇಂದಿನವರೆಗೆ ಯಾವುದೇ ಕೊರೋನಾ ಸೋಂಕು ಪ್ರಕರಣ ಇಲ್ಲದೆ ಗ್ರೀನ್ ಝೋನ್ ನಲ್ಲಿ ಸುರಕ್ಷಿತವಾಗಿದ್ದ ಉಡುಪಿ ಜಿಲ್ಲೆಗೆ ಕೊರೋನಾ ಸಂಕಟ ಶುರುವಾಗಿದೆ. ಮಂಗಳೂರಿನ ಕೊರೊನಾ ಹಾಟ್ ಸ್ಪಾಟ್ ಎನಿಸಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಿಂದಾಗಿ ಕೃಷ್ಣನಗರಿ ಉಡುಪಿ ಜನರೂ ಆತಂಕ ಪಡುವ ಹಾಗಾಗಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಡುಪಿ ಮೂಲದ ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕ ಪಡೆದಿದ್ದ 13 ಮಂದಿ ಉಡುಪಿ ಜಿಲ್ಲೆಯಲ್ಲಿದ್ದಾರೆ. ಈ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದೀಗ ಈ 13ಮಂದಿಯಲ್ಲಿ ಇಬ್ಬರ ವರದಿ ನೆಗೆಟಿವ್ ಬಂದಿದ್ದು, ಇನ್ನುಳಿದ 11ಮಂದಿಯ ವರದಿಗಾಗಿ ಎದುರು ನೋಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಭಯಭೀತರನ್ನಾಗಿಸಿದ ಫಸ್ಟ್ ನ್ಯೂರೋ ಆಸ್ಪತ್ರೆ ಸದ್ಯ ಉಡುಪಿ ಜನರನ್ನು ಆತಂಕಕ್ಕೆ ದೂಡಿದ್ದು ಸುಳ್ಳಲ್ಲ. ಇನ್ನೊಂದೆಡೆ, ತಮಿಳುನಾಡಿನಿಂದ ಆಗಮಿಸಿದ ಕಾರ್ಮಿಕನೊಬ್ಬ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದಾನೆ. ಕಾರ್ಕಳಕ್ಕೆ ಸಿಮೆಂಟ್ ಸಾಗಿಸಿದ್ದ ತಮಿಳುನಾಡು ಮೂಲದ ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಈ ಕಾರ್ಮಿಕನ ಸಂಪರ್ಕಕ್ಕೆ ಬಂದಿದ್ದ ಕಾರ್ಕಳದ ಮೂವರು ಕಾರ್ಮಿಕರನ್ನು ಹಾಗೂ ಸ್ಥಳದಲ್ಲಿದ್ದ ವಲಸೆ ಕಾರ್ಮಿಕರು ಸೇರಿ ಒಟ್ಟು ನಾಲ್ಕು ಕಾರ್ಮಿಕರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಈ ನಾಲ್ಕು ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಮಿಳುನಾಡಿನ ಈ ಸೋಂಕಿತ ಕಾರ್ಕಳ ನಗರದಲ್ಲಿ ಸಿಮೆಂಟ್ ಇಳಿಸಿ ತಮಿಳುನಾಡಿಗೆ ತೆರಳಿದ್ದ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.